ಇಸ್ಲಾಮಾಬಾದ್ (ಪಿಟಿಐ): ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಸಂಸ್ಥಾಪಕ ಮತ್ತು ಮುಂಬೈ ದಾಳಿಯ ರೂವಾರಿ ಹಫೀಜ್ ಮೊಹಮ್ಮದ್ ಸಯೀದ್ನ ಪತ್ತೆಗೆ ಬಲೆ ಬೀಸಿರುವ ಅಮೆರಿಕವು, ಆತನ ಬಗ್ಗೆ ಸುಳಿವು ಮತ್ತು ಮಾಹಿತಿ ನೀಡಿದವರಿಗೆ ಒಂದು ಕೋಟಿ ಡಾಲರ್ಗಳ ಬಹುಮಾನ ಘೋಷಿಸಿದೆ.
ಹಫೀಜ್ ಜೊತೆಗೆ ಇನ್ನೂ ಮೂವರು ಉಗ್ರ ಭಯೋತ್ಪಾದಕರ ತಲೆಗೆ ಅಮೆರಿಕ ಇದೇ ರೀತಿ ಬಹುಮಾನ ಘೋಷಿಸಿದೆ. ಆಫ್ಘನ್ ತಾಲಿಬಾನ್ ಮುಖ್ಯಸ್ಥ ಮುಲ್ಲಾ ಓಮರ್, ಇರಾಕ್ನ ಅಲ್ಖೈದಾ ನಾಯಕ ಅಬು ದುವಾ, ಇರಾನ್ನಲ್ಲಿ ಅಲ್-ಖೈದಾ ಕಾರ್ಯಾಚರಣೆ ನಡೆಸುತ್ತಿರುವ ಯಾಸೀನ್ ಅಲ್-ಸುರಿ ಈ ಪಟ್ಟಿಯಲ್ಲಿ ಸೇರಿದ್ದಾರೆ.
ಅಮೆರಿಕದ `ನ್ಯಾಯಕ್ಕಾಗಿ ಬಹುಮಾನ~ ಯೋಜನೆಯ ವೆಬ್ಸೈಟ್ನಲ್ಲಿ ಹಫೀಜ್ ಸಯೀದ್ ಸೇರಿದಂತೆ ಈ ಉಗ್ರರ ಹೆಸರು ಪ್ರಕಟಿಸಲಾಗಿದೆ.ಈ ನಾಲ್ವರಲ್ಲದೆ, ಅಮೆರಿಕ ಅತ್ಯಧಿಕ ಮೊತ್ತದ ಬಹುಮಾನ ಘೋಷಿಸಿರುವುದು ಅಲ್ಖೈದಾ ಹಾಲಿ ಮುಖ್ಯಸ್ಥ ಐಮನ್ ಅಲ್-ಜವಾಹಿರಿ ತಲೆಗೆ. ಆತನ ಪತ್ತೆಗೆ 2.5 ಕೋಟಿ ಡಾಲರ್ಗಳ ಬಹುಮಾನ ಪ್ರಕಟಿಸಲಾಗಿದೆ.
ಹಫೀಜ್ ಸಯೀದ್ ಕುರಿತಾಗಿ ವೆಬ್ಸೈಟ್ನಲ್ಲಿ ವಿವರ ನೀಡಿರುವ ಅಮೆರಿಕ, `61 ವರ್ಷದ ಈತ ಅರೇಬಿಕ್ ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ನಿವೃತ್ತ ಪ್ರಾಧ್ಯಾಪಕ. ಪಾಕಿಸ್ತಾನ ಮತ್ತು ಭಾರತದ ಕೆಲವು ಭಾಗಗಳಲ್ಲಿ ಇಸ್ಲಾಮಿಕ್ ಆಡಳಿತ ಹೇರಲು ಯತ್ನಿಸುತ್ತಿದ್ದ ಜಮಾತ್-ಉದ್-ದವಾ ಸಂಸ್ಥಾಪಕ ಹಾಗೂ ಇದರ ಉಗ್ರಗಾಮಿ ಅಂಗವಾದ ಲಷ್ಕರ್-ಎ-ತೊಯ್ಬಾ ಸಂಘಟನೆ ರೂವಾರಿ~ ಎಂದು ಹೇಳಿದೆ.
`ಹಫೀಜ್ ಆರು ಅಮೆರಿಕ ಪ್ರಜೆಗಳು ಸೇರಿದಂತೆ ಒಟ್ಟು 166 ಜನರು ಮೃತಪಟ್ಟಿರುವ 2008ರ ಮುಂಬೈ ದಾಳಿ ಒಳಗೊಂಡಂತೆ ಹಲವು ಭಯೋತ್ಪಾದನಾ ದಾಳಿಗಳಲ್ಲಿ ಸಂಚು ರೂಪಿಸಿದ್ದಾನೆ. ಭಾರತ ಸಹ ಆತನ ವಿರುದ್ಧ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಇದರ ಹೊರತಾಗಿ ಅಮೆರಿಕದ ಹಣಕಾಸು ಇಲಾಖೆ ಕೂಡ ವಿಶೇಷ ಆದೇಶದಡಿ ಸಯೀದ್ನ ಮೇಲೆ ನಿರ್ಬಂಧ ಹೇರಿದೆ~ ಎಂದೂ ವೆಬ್ಸೈಟ್ ತಿಳಿಸಿದೆ.
ಅಮೆರಿಕದ ಹಣಕಾಸು ಇಲಾಖೆಯ ಈ ವಿಶೇಷ ಆದೇಶವು, ಭಯೋತ್ಪಾದನಾ ಕೃತ್ಯ ಎಸಗುವ ವಿದೇಶಿ ವ್ಯಕ್ತಿಗಳು ಮತ್ತು ಗುಂಪುಗಳ ಆಸ್ತಿ, ಬ್ಯಾಂಕ್ ಖಾತೆ ಇತ್ಯಾದಿಯನ್ನು ಮುಟ್ಟುಗೋಲು ಹಾಕಿಕೊಂಡು ಉಗ್ರರ ಆರ್ಥಿಕ ಜಾಲ ಮುರಿಯುವ ಅಧಿಕಾರವನ್ನು ಅಮೆರಿಕ ಸರ್ಕಾರಕ್ಕೆ ನೀಡಿದೆ.
ಅಮೆರಿಕದ ಹತಾಶೆ ಕ್ರಮ
ನ್ಯಾಟೊ ಸರಕು ಸಾಗಣೆ ಮತ್ತು ದ್ರೋಣ್ ದಾಳಿ ವಿರುದ್ಧ ಪಾಕಿಸ್ತಾನದಾದ್ಯಂತ ಪ್ರತಿಭಟನೆ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಹತಾಶೆಗೊಂಡ ಅಮೆರಿಕ, ತಮ್ಮ ಪತ್ತೆಗೆ ಬಹುಮಾನ ಘೋಷಿಸಿದೆ ಎಂದು ಹಫೀಜ್ ಸಯೀದ್ ಪ್ರತಿಕ್ರಿಯಿಸಿರುವುದಾಗಿ ಅಲ್-ಜಜೀರಾ ನ್ಯೂಸ್ ಚಾನೆಲ್ ಟಿವಿ ವರದಿ ಮಾಡಿದೆ.ಈ ಮಧ್ಯೆ ಹಫೀಜ್ ಮನೆ ಸುತ್ತ ಜೆಯುಡಿ ಸಂಘಟನೆ ಭದ್ರತೆ ಹೆಚ್ಚಿಸಿಕೊಂಡಿದೆ.
ಹಫೀಜ್ ಜಿಹಾದಿ ರಾಜಕೀಯದ ಹಾದಿ
ಅಮೆರಿಕದ `ಮೋಸ್ಟ್ ವಾಂಟೆಂಡ್~ ಉಗ್ರರ ಪಟ್ಟಿಯಲ್ಲಿರುವ ಹಫೀಜ್ ಸಯೀದ್ ಈಗ ಪಾಕಿಸ್ತಾನದ ಜಿಹಾದಿ ರಾಜಕೀಯದ ನೇತಾರನಾಗಿ ಮತ್ತೆ ಮಿಂಚುತ್ತಿದ್ದಾನೆ.
ಮುಂಬೈ ದಾಳಿಯ ನಂತರ ಸ್ಪಲ್ಪ ಹಿನ್ನಡೆ ಅನುಭವಿಸಿದ್ದ ಸಯೀದ್ ಕಳೆದ ವರ್ಷ ಪಾಕಿಸ್ತಾನದ 40 ಉಗ್ರಗಾಮಿ ಹಾಗೂ ಬಂಡುಕೋರ ಗುಂಪುಗಳನ್ನು ದೆಫಾ-ಎ-ಪಾಕಿಸ್ತಾನ್ ಕೌನ್ಸಿಲ್ (ಡಿಪಿಸಿ) ಎಂಬ ಸಂಘಟನೆಯಡಿ ಒಗ್ಗೂಡಿಸಿ ಮತ್ತೆ ಮುಖ್ಯವಾಹಿನಿ ರಾಜಕೀಯದಲ್ಲಿ ಕಾಣಿಸಿಕೊಂಡಿದ್ದ.
ಕಳೆದ ವರ್ಷ ನ್ಯಾಟೊ ಪಡೆಗಳಿಂದ 24 ಪಾಕ್ ಸೈನಿಕರು ಹತರಾದಾಗ ಈ ಸಂಘಟನೆ ಪಾಕಿಸ್ತಾನದಾದ್ಯಂತ ರ್ಯಾಲಿ ಆಯೋಜಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.