ADVERTISEMENT

ಭಾರತ ಸೇರಿದಂತೆ ನಾಲ್ಕು ದೇಶಗಳಲ್ಲಿ ಪ್ರವಾಹಕ್ಕೆ 600 ಬಲಿ: ವಿಶ್ವಸಂಸ್ಥೆ

ಬಾಂಗ್ಲಾದೇಶ,ನೇಪಾಳ, ಮ್ಯಾನ್ಮಾರ್‌ನಲ್ಲಿಯೂ ಮಳೆಯ ಅಬ್ಬರ

ಪಿಟಿಐ
Published 27 ಜುಲೈ 2019, 13:51 IST
Last Updated 27 ಜುಲೈ 2019, 13:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಶ್ವಸಂಸ್ಥೆ: ಈ ಬಾರಿ ಸುರಿದ ಭಾರಿ ಮಳೆ ಹಾಗೂ ಪ್ರವಾಹಕ್ಕೆ ಭಾರತ, ಬಾಂಗ್ಲಾದೇಶ, ನೇಪಾಳ ಮತ್ತು ಮ್ಯಾನ್ಮಾರ್ ದೇಶಗಳಲ್ಲಿ ಕನಿಷ್ಠ 600 ಮಂದಿ ಬಲಿಯಾಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ಪ್ರವಾಹದದಿಂದಾಗಿ ಎರಡೂವರೆ ಕೋಟಿಗಿಂತಲೂ ಹೆಚ್ಚು ಜನ ತೊಂದರೆ ಅನುಭವಿಸಿದ್ದಾರೆ ಎಂದು ವಿಶ್ವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್‌ ಅವರ ಉಪ ವಕ್ತಾರ ಫರ್ಹಾನ್‌ ಹಕ್‌ ತಿಳಿಸಿದ್ದಾರೆ.

ಐದು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ADVERTISEMENT

ಈ ನಾಲ್ಕು ದೇಶಗಳ ಸರ್ಕಾರಗಳು ವಿಶ್ವಸಂಸ್ಥೆ ಹಾಗೂ ಇತರ ಸಂಸ್ಥೆಗಳ ನೆರವಿನೊಂದಿಗೆ ಪರಿಹಾರ ಕಾರ್ಯ ನಡೆಸುತ್ತಿವೆ ಎಂದಿದ್ದಾರೆ.

ಭಾರತದ ಪ್ರವಾಹ ಪೀಡಿತ ರಾಜ್ಯಗಳಾದ ಅಸ್ಸಾಂ, ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ರಾಜ್ಯ ಸರ್ಕಾರಗಳ ಜೊತೆ ಪರಿಹಾರ ಕಾರ್ಯಕ್ಕೆ ಯುನಿಸೆಫ್‌ ಕೈಜೋಡಿಸಿದೆ ಎಂದೂ ಹೇಳಿದ್ದಾರೆ.

ಕೆಲವು ಪ್ರದೇಶಗಳಲ್ಲಿ ಪ್ರವಾಹದ ಪರಿಣಾಮ ರಸ್ತೆ ಹಾಗೂ ಸೇತುವೆಗಳು ಕೊಚ್ಚಿಕೊಂಡು ಹೋಗಿವೆ. ಇದರಿಂದ ರಕ್ಷಣಾ ಕಾರ್ಯಕರ್ತರಿಗೆ ಅಲ್ಲಿಗೆ ತೆರಳಲು ಸಾಧ್ಯವಾಗಿಲ್ಲ. ಇಂತಹ ಪ್ರದೇಶಗಳಲ್ಲಿ ಮುಖ್ಯವಾಗಿ ಮಕ್ಕಳಿಗೆ ಶುದ್ಧ ಕುಡಿಯುವ ನೀರು, ಆಹಾರದ ಅಗತ್ಯವಿದೆ ಎಂದು ಯುನಿಸೆಫ್‌ ಹೇಳಿದೆ.

40ಲಕ್ಷ ಮಕ್ಕಳೂ ಸೇರಿದಂತೆ ಭಾರತದಲ್ಲಿ ಒಂದು ಕೋಟಿಗಿಂತಲೂ ಅಧಿಕ ಜನರು ಪ್ರವಾಹದಿಂದ ಸಂಕಷ್ಟಕ್ಕೊಳಗಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.