ಚಿನ್ಮಯಿ ಕೃಷ್ಣ ದಾಸ್
ಢಾಕಾ: ದೇಶದ್ರೋಹ ಆರೋಪದಡಿ ಬಂಧನಕ್ಕೊಳಗಾಗಿರುವ ಹಿಂದೂ ಸಂಘಟನೆಯ ಮುಖಂಡ ಚಿನ್ಮಯಿ ಕೃಷ್ಣ ದಾಸ್ ಸೇರಿದಂತೆ 17 ಜನರ ಬ್ಯಾಂಕ್ ಖಾತೆಗಳನ್ನು 30 ದಿನಗಳವರೆಗೆ ಸ್ಥಗಿತಗೊಳಿಸಬೇಕೆಂದು ಬಾಂಗ್ಲಾದೇಶ ಹಣಕಾಸು ಅಧಿಕಾರಿಗಳು ಆದೇಶಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬಾಂಗ್ಲಾದೇಶ ಬ್ಯಾಂಕ್ನ ಹಣಕಾಸು ಗುಪ್ತಚರ ಘಟಕ (ಬಿಎಫ್ಐಯು) ವಿವಿಧ ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ನಿರ್ದೇಶಿಸಿದೆ. ಈ ಖಾತೆಗಳ ಎಲ್ಲ ರೀತಿಯ ವಹಿವಾಟುಗಳನ್ನು ಒಂದು ತಿಂಗಳುಗಳ ಕಾಲ ಸ್ಥಗಿತಗೊಳಿಸಿದೆ ಎಂದು ‘ಪ್ರಥೋಮ್ ಅಲೊ’ ಪತ್ರಿಕೆಯು ವರದಿ ಮಾಡಿದೆ.
ಚಿನ್ಮಯಿ ಸೇರಿದಂತೆ 17 ಜನರು ಹೊಂದಿರುವ ಎಲ್ಲ ರೀತಿಯ ವ್ಯವಹಾರ ಖಾತೆಗಳ ನವೀಕರಿಸಿದ ವಹಿವಾಟುಗಳ ‘ಸ್ಟೇಟ್ಮೆಂಟ್’ಗಳನ್ನು ಒಳಗೊಂಡಂತೆ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಬ್ಯಾಂಕ್ನ ಮುಂದಿನ ಮೂರು ಕೆಲಸದ ದಿನಗಳಲ್ಲಿ ನೀಡಬೇಕು ಎಂದು ಬಿಎಫ್ಐಯು ಹೇಳಿದೆ.
ಇತ್ತೀಚೆಗೆ ಹಿಂದೂ ಧಾರ್ಮಿಕ ನಾಯಕ ಚಿನ್ಮಯಿ ಕೃಷ್ಣದಾಸ್ ಅವರನ್ನು ದೇಶದ್ರೋಹ ಪ್ರಕರಣದಲ್ಲಿ ಬಂಧಿಸಲಾಗಿದ್ದು, ಇವರಿಗೆ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿತು. ಇದನ್ನು ಖಂಡಿಸಿ ಹಲವೆಡೆ ಹಿಂದೂಗಳು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಹಾಗೂ ಬೆಂಬಲಿಗರ ನಡುವಿನ ಘರ್ಷಣೆಯಲ್ಲಿ ವಕೀಲರೊಬ್ಬರು ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.