
ಬಾಂಗ್ಲಾ ಧ್ವಜ
ಢಾಕಾ: ಬಾಳೆ ಹಣ್ಣಿನ ವಿಚಾರವಾಗಿ ನಡೆದ ಗಲಾಟೆಯಲ್ಲಿ ಹಿಂದೂ ವ್ಯಾಪಾರಿಯೊಬ್ಬರನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ಬಾಂಗ್ಲಾದೇಶದ ಘಾಜಿಪುರ ಜಿಲ್ಲೆಯ ಕಾಳಿಗಂಜ್ನಲ್ಲಿ ನಡೆದಿದೆ.
ಹತ್ಯೆಯಾದ ವ್ಯಾಪಾರಿಯನ್ನು ಲಿತಾನ್ ಚಂದ್ರ ಘೋಷ್ ಎಂದು ಗುರುತಿಸಲಾಗಿದೆ. ಘೋಷ್ ಅವರನ್ನು ಥಳಿಸಿ ಹತ್ಯೆ ಮಾಡಿದ ಶಂಕೆ ಮೇರೆಗೆ ಒಂದೇ ಕುಟುಂಬದ ಸದಸ್ಯರಾದ ಮಾಸಂ ಮಿಯಾ (28), ಸ್ವಪನ್ ಮಿಯಾ (55), ಮಜೆದಾ ಖಾತುನ್ (45) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘೋಷ್ ಅವರು ‘ಬೈಸಾಖಿ ಸ್ವೀಟ್ಮೀಟ್ ಆ್ಯಂಡ್ ಹೋಟೆಲ್’ನ ಮಾಲೀಕರಾಗಿದ್ದರು. ಮಾಸಂ ಮಿಯಾ ಅವರು ಬಾಳೆ ಬೆಳಗಾರರಾಗಿದ್ದು, ಅವರ ತೋಟದಲ್ಲಿ ಬಾಳೆ ಹಣ್ಣಿನ ಹಲವು ಗೊನೆಗಳು ನಾಪತ್ತೆಯಾಗಿದ್ದವು. ಹುಡುಕಾಟದ ವೇಳೆ ಘೋಷ್ ಅವರ ಹೋಟೆಲ್ನಲ್ಲಿ ಬಾಳೆ ಗೊನೆಗಳು ಸಿಕ್ಕಿದ್ದವು. ಹೀಗಾಗಿ, ಘೋಷ್ ಹಾಗೂ ಮಾಸಂ ಕುಟುಂಬದವರ ನಡುವೆ ಜಗಳ ನಡೆದಿತ್ತು. ಈ ವೇಳೆ ಆರೋಪಿಗಳು ಘೋಷ್ ಅವರನ್ನು ಥಳಿಸಿದ ಪರಿಣಾಮ ಅವರು ಸ್ಥಳದಲ್ಲೇ ಕುಸಿದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾಳಿಗಂಜ್ನಲ್ಲಿ ಶನಿವಾರ ನಡೆದ ಈ ಘಟನೆಗೂ ಬಾಂಗ್ಲಾದೇಶದಲ್ಲಿ ಇತ್ತೀಚೆಗಿನ ದಿನಗಳಲ್ಲಿ ಹಿಂದೂಗಳ ಮೇಲೆ ನಡೆದ ಹಿಂಸಾಚಾರಕ್ಕೂ ಸಂಬಂಧವಿದೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.