ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್
ಲಂಡನ್: ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಅವರು ಲಂಡನ್ನಿನಲ್ಲಿ ದೀಪಾವಳಿ ಹಬ್ಬಕ್ಕೆ ಸಂಬಂಧಿಸಿದ ಕಾರ್ಯಕ್ರಮದ ಆತಿಥ್ಯ ಮೊದಲು ಸೂಕ್ತ ಸಮಾಲೋಚನೆ ನಡೆಸಿರಲಿಲ್ಲ ಎಂದು ಅಲ್ಲಿನ ಹಿಂದೂಗಳ ಪೈಕಿ ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಆತಿಥ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಮಾಂಸಾಹಾರ ಮತ್ತು ಮದ್ಯವನ್ನು ನೀಡಲಾಗಿತ್ತು ಎನ್ನಲಾಗಿದೆ.
ಹಿಂದೂಗಳ ಸಂಘಟನೆಯಾದ ‘ಇನ್ಸೈಟ್ ಯುಕೆ’, ಹಿಂದೂ ಹಬ್ಬದ ಸಾಂಸ್ಕೃತಿಕ ಆಯಾಮವನ್ನು ಅರ್ಥ ಮಾಡಿಕೊಳ್ಳದೆ ಇರುವುದನ್ನು ಪ್ರಶ್ನಿಸಿದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೊದಲು ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಮಾಲೋಚನೆ ನಡೆಸುವ ಅಗತ್ಯವಿದೆ ಎಂದು ಇತರ ಕೆಲವರು ಹೇಳಿದ್ದಾರೆ.
‘ದೀಪಾವಳಿ ಎಂಬುದು ಸಂಭ್ರಮಿಸುವ ಸಂದರ್ಭ ಮಾತ್ರವೇ ಅಲ್ಲ. ಅದು ಬಹಳ ಆಳವಾದ ಧಾರ್ಮಿಕ ಅರ್ಥವನ್ನೂ ಹೊಂದಿದೆ. ಪವಿತ್ರವಾದ ದೀಪಾವಳಿ ಹಬ್ಬವು ಶುದ್ಧತೆಗೆ ಮತ್ತು ಭಕ್ತಿಗೆ ಒತ್ತು ನೀಡುತ್ತದೆ. ಹೀಗಾಗಿ, ಸಾಂಪ್ರದಾಯಿಕವಾಗಿ ಅಲ್ಲಿ ಸಸ್ಯಾಹಾರಿ ಆಹಾರ ಇರಬೇಕು, ಮದ್ಯ ಇರಲೇಬಾರದು’ ಎಂದು ‘ಇನ್ಸೈಟ್ ಯುಕೆ’ ಹೇಳಿದೆ.
‘ಪ್ರಧಾನಿಯ ಆತಿಥ್ಯದಲ್ಲಿ ನಡೆದ ದೀಪಾವಳಿ ಕಾರ್ಯಕ್ರಮದಲ್ಲಿ ನೀಡಿದ ಆಹಾರವು, ದೀಪಾವಳಿ ಜೊತೆ ಬೆಸೆದುಕೊಂಡಿರುವ ಧಾರ್ಮಿಕ ಸಂಪ್ರದಾಯದ ಬಗ್ಗೆ ಅರಿವಿನ ಕೊರತೆಯನ್ನು ಅಥವಾ ಗೌರವದ ಕೊರತೆಯನ್ನು ತೋರಿಸುತ್ತದೆ. ಸಾಂಸ್ಕೃತಿಕ ಸೂಕ್ಷ್ಮಗ್ರಾಹಿತ್ವದ ದೃಷ್ಟಿಯಿಂದ, ಒಳಗೊಳ್ಳುವಿಕೆಯ ದೃಷ್ಟಿಯಿಂದ ಹಿಂದೂ ಸಮುದಾಯದ ಸಂಘಟನೆಗಳು ಮತ್ತು ಧಾರ್ಮಿಕ ನಾಯಕರ ಜೊತೆ ಸಮಾಲೋಚನೆ ನಡೆಸಲಾಗಿತ್ತೇ ಎಂಬ ಪ್ರಶ್ನೆಯನ್ನು ಎತ್ತುತ್ತದೆ’ ಎಂದು ಅದು ಹೇಳಿದೆ.
ಅಕ್ಟೋಬರ್ 29ರಂದು ನಡೆದ ಈ ಕಾರ್ಯಕ್ರಮದಲ್ಲಿ ನೀಡಲಾದ ಆಹಾರದ ಬಗ್ಗೆ ಪ್ರಧಾನಿ ಕಾರ್ಯಾಲಯದಿಂದ ಪ್ರತಿಕ್ರಿಯೆ ಬಂದಿಲ್ಲ. ಆದರೆ ಈ ಕಾರ್ಯಕ್ರಮವು ವಿಭಿನ್ನ ಸಮುದಾಯಗಳನ್ನು ಒಳಗೊಂಡಿತ್ತು, ಸಿಖ್ಖರು ಆಚರಿಸುವ ‘ಬಂದಿ ಛೋಡ್ ದಿವಸ್’ ಕೂಡ ಇದರ ಭಾಗವಾಗಿತ್ತು ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.