ಲಂಡನ್:ಎರಡನೇ ಮಹಾಯುದ್ಧದಲ್ಲಿ ಬ್ರಿಟನ್ ಪರ ಗೂಢಚಾರಿಕೆ ಮಾಡಿ, ಜರ್ಮನಿಯಲ್ಲಿ ದಾರುಣವಾಗಿ ಹತ್ಯೆಯಾಗಿದ್ದ ಟಿಪ್ಪು ವಂಶಸ್ಥೆ, ನೂರ್ ಇನಾಯತ್ ಖಾನ್ ಅವರ ಜೀವನಗಾಥೆ ಲಂಡನ್ ವೇದಿಕೆಯಲ್ಲಿ ಪ್ರದರ್ಶನಗೊಂಡಿದೆ.
ಇದೇ ತಿಂಗಳು ಸೌತ್ ವರ್ಕ್ ರಂಗಮಂದಿರದಲ್ಲಿ ಸೂಫಿ ಪ್ರಿಯೆ, ಬ್ರಿಟನ್ ಪರ ಗೂಢಚಾರಿಣಿ ಅವರ ಜೀವನ ಚರಿತ್ರೆಯ ‘ನೂರ್’ ಪ್ರದರ್ಶನಗೊಂಡಿದೆ.
ಇಂಗ್ಲೆಂಡ್ ಮೂಲದ ಲೇಖಕ ಶ್ರಬಾನಿ ಬಸು ಅವರು ‘ಸ್ಪೈ ಪ್ರಿನ್ಸೆಸ್: ದಿ ಲೈಫ್ ಆಫ್ ನೂರ್ ಇನಾಯತ್ ಖಾನ್‘ ಪುಸ್ತಕದಲ್ಲಿನೂರ್ ಅವರು ಜೀವನದಲ್ಲಿ ಎದುರಿಸಿದ ಮಜಲುಗಳನ್ನು ವಿವರಿಸಿದ್ದಾರೆ.
ಅವರ ಕತೆಯನ್ನು ಹಂಚಿಕೊಳ್ಳುವುದು ನನಗೆ ತುಂಬಾ ಅಗತ್ಯವಾಗಿದೆ. ಏಕೆಂದರೆ ಇದು ಕೇವಲ ಅಧ್ಯಾಯವಲ್ಲ ಇದು ಬ್ರಿಟನಿನನ ಇತಿಹಾಸ ಇದನ್ನು ಎಲ್ಲರಿಗೂ ಪರಿಚಯಿಸುವುದು ಅಗತ್ಯ ಎಂದು ಭಾರತೀಯ ಮೂಲದ ನಿರ್ದೇಶಕಿ ಪೂನಂ ಬ್ರಾಹ್ ಹೇಳಿದ್ದಾರೆ.
ನಮ್ಮ ಸ್ವಾತಂತ್ರ್ಯಕ್ಕಾಗಿ ಎರಡನೇ ಮಹಾಯುದ್ಧದಲ್ಲಿ ಯಾರೆಲ್ಲಾ ಹೋರಾಡಿದ್ದಾರೆ ಮತ್ತು ಏನೆಲ್ಲಾ ತ್ಯಾಗ ಮಾಡಿದ್ದಾರೆ ಎಂಬುದರ ಕುರಿತ ನಿರೂಪಣೆ ಇದಾಗಿದೆ. ಇದಕ್ಕೆ ಉತ್ತಮ ವಿಮರ್ಶೆಗಳು ಬರುತ್ತಿವೆ.
ನೂರ್ ಅವರ ತಂದೆ ಹಜರತ್ ಇನಾಯತ್ ಖಾನ್ಭಾರತೀಯ ಸೂಫಿ ಸಂತರಾಗಿದ್ದರು. ನೂರ್ ತಂದೆಯಂತೆಯೇ ಗಾಯಕಿಯಾಗಿ ಸೂಫಿಸಂನ ರಾಯಭಾರಿಯಾಗುವ ಸಾಧ್ಯತೆಯಿತ್ತು; ಮಕ್ಕಳ ಲೇಖಕಿಯಾಗಿ ಮನ್ನಣೆ ಪಡೆಯುವ ದಾರಿಯೂ ಎದುರಿಗಿತ್ತು. ಆದರೆ, ಆಕೆ ಆರಿಸಿಕೊಂಡಿದ್ದು ಸೇನೆಯ ಬದುಕನ್ನು. ಅಪ್ಪನ ಅಕಾಲಿಕ ಸಾವು ಹಾಗೂ ಎರಡನೇ ಮಹಾಯುದ್ಧದ ಸಂದರ್ಭದಲ್ಲಿನ ಸಾಮಾಜಿಕ ಸ್ಥಿತ್ಯಂತರಗಳು ನೂರ್ ಸೇನೆಯತ್ತ ಮುಖಮಾಡಲು ಕಾರಣವಾದವು.
ಗೂಢಚಾರಿಣಿಯಾಗಿ ಕಾರ್ಯನಿರ್ವಹಿಸಿದ ಇವರು1944 ರಲ್ಲಿ ಜರ್ಮನಿಯ ‘ಯುದ್ಧ ಕೈದಿಗಳ ಶಿಬಿರದಲ್ಲಿ ಹತ್ಯೆಗೀಡಾಗಿದ್ದರು. ಆದರೆ, ಆಕೆ ಸಾವಿಗೂ ಮುನ್ನ ತನಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಜರ್ಮನಿಗೆ ತಿಳಿಸಿರಲಿಲ್ಲ. ಕೊನೆಗೆ ತನ್ನ ಹೆಸರನ್ನೂ ಹೇಳಿರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.