ಕೊಲಂಬೊ: ಕಳೆದ ವಾರ ಕೊಲಂಬೊ ತೀರದ ಸಮೀಪ, ರಾಸಾಯನಿಕಗಳನ್ನು ಹೊತ್ತು ತರುತ್ತಿದ್ದ ಸರಕು ಹಡಗಿಗೆ ಬೆಂಕಿ ಹೊತ್ತಿಕೊಂಡಿದ್ದ ಪರಿಣಾಮ ನೈಟ್ರೋಜನ್ ಡೈಆಕ್ಸೈಡ್ ಸೋರಿಕೆ ಆಗಿದೆ. ಹೀಗಾಗಿ, ಸುತ್ತಲಿನ ಪ್ರದೇಶಗಳಲ್ಲಿ ಲಘುವಾಗಿ ಆಮ್ಲ ಮಳೆ ಬೀಳುವ ನಿರೀಕ್ಷೆ ಎದೆ ಎಂದು ಶ್ರೀಲಂಕಾದ ಕರಾವಳಿ ಪರಿಸರ ಸಂರಕ್ಷಣಾ ಪ್ರಾಧಿಕಾರ ಎಚ್ಚರಿಸಿದೆ.
ಪ್ರತಿಕೂಲ ಹವಾಮಾನ ಏರ್ಪಟ್ಟರೆ ಎಚ್ಚರಿಕೆಯಿಂದ ಇರಿ ಎಂದು ಜನರಿಗೆ ತಿಳಿಸಿದೆ.
ಹಡಗಿನಲ್ಲಿ ಸಿಲುಕಿದ್ದ ಭಾರತ, ರಷ್ಯಾ, ಚೀನಾ ದೇಶಗಳ 25ಕ್ಕೂ ಹೆಚ್ಚು ಸಿಬ್ಬಂದಿಯನ್ನು ಮಂಗಳವಾರವೇ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಡಗು ಬೆಂಕಿಗೀಡಾದ ವೇಳೆ ಭಾರಿ ಪ್ರಮಾಣದಲ್ಲಿ ನೈಟ್ರೋಜನ್ ಡೈಆಕ್ಸೈಡ್ ಸೋರಿಕೆಯಾಗಿರುವುದು ತಿಳಿದುಬಂದಿದೆ. ಮಳೆಗಾಲದಲ್ಲಿ ನೈಟ್ರೋಜನ್ ಡೈಆಕ್ಸೈಡ್ ಸೋರಿಕೆಯಾದರೆ, ಸ್ವಲ್ಪ ಪ್ರಮಾಣದಲ್ಲಿ ಆಮ್ಲ ಮಳೆ ಬೀಳುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಕರಾವಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಮಳೆಯಲ್ಲಿ ನೆನೆಯದಂತೆ ಎಚ್ಚರಿಕೆ ನೀಡಿದ್ದೇವೆ ಎಂದು ಕಡಲ ಪರಿಸರ ರಕ್ಷಣಾ ಪ್ರಾಧಿಕಾರದ ಮುಖ್ಯಸ್ಥ ದರ್ಶನಿ ಲಾಹಂದಪುರ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.