ಒಟ್ಟಾವ: ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾಗಿಯಾದ ಇಬ್ಬರು ಶಂಕಿತರನ್ನು ಕೆನಡಾ ಪೊಲೀಸರು ಶೀಘ್ರವೇ ಬಂಧಿಸುವ ಸಾಧ್ಯತೆ ಇದ್ದು, ಇಬ್ಬರು ಶಂಕಿತರು ಕೆನಡಾದಲ್ಲೇ ಇದ್ದಾರೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.
‘ಶಂಕಿತ ಹಂತಕರು ನಿಜ್ಜರ್ ಹತ್ಯೆಯ ನಂತರ ಕೆನಡಾ ತೊರೆದಿಲ್ಲ. ಇಬ್ಬರ ಮೇಲೂ ಪೊಲೀಸರು ಕಣ್ಗಾವಲು ಇರಿಸಿದ್ದಾರೆ. ಕೆಲವೇ ವಾರಗಳಲ್ಲಿ ಅವರನ್ನು ಬಂಧಿಸುವ ಸಾಧ್ಯತೆ ಇದೆ’ ಎಂದು ಹೆಸರು ಬಹಿರಂಗಪಡಿಸದ ಮೂಲಗಳನ್ನು ಉಲ್ಲೇಖಿಸಿ ‘ದಿ ಗ್ಲೋಬ್ ಅಂಡ್ ಮೈಲ್’ ಪತ್ರಿಕೆಯು ಬುಧವಾರ ವರದಿ ಮಾಡಿದೆ.
ಹಂತಕರು ಮತ್ತು ಭಾರತ ಸರ್ಕಾರದ ನಡುವಿನ ಸಂಪರ್ಕದ ಬಗ್ಗೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸುವಾಗ ಬಹಿರಂಗಪಡಿಸಲಿದ್ದಾರೆ ಎಂದು ಈ ವರದಿ ಹೇಳಿದೆ.
ಪತ್ರಿಕೆಯ ವರದಿ ಪ್ರಕಾರ, ತನಿಖಾ ತಂಡವು ‘ಶಂಕಿತರ ಬಂಧನ ಸನ್ನಿಹಿತವಾಗಿರುವ ಬಗ್ಗೆ ತಿಳಿದಿದೆ. ಆದರೆ, ತನಿಖೆ ಇನ್ನೂ ಪ್ರಗತಿಯಲ್ಲಿರುವುದರಿಂದ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.