
ಬೋಟ್ಸ್ವಾನ್ನಲ್ಲಿ ಭಾರತಕ್ಕೆ ಸಾಂಕೇತಿಕವಾಗಿ ಹಸ್ತಾಂತರ ಮಾಡಲಾದ ಚೀತಾಗಳನ್ನು ಮೀಸಲು ಅರಣ್ಯಕ್ಕೆ ಕ್ವಾರಂಟೈನ್ಗಾಗಿ ಗುರುವಾರ ಬಿಡಲಾಯಿತು
– ಪಿಟಿಐ ಚಿತ್ರ
ಗ್ಯಾಬರೋನೆ: ಬೋಟ್ಸ್ವಾನ್ನ ಎಂಟು ಚೀತಾಗಳನ್ನು ಗುರುವಾರ ಭಾರತಕ್ಕೆ ಹಸ್ತಾಂತರಿಸಲಾಯಿತು.
ಬೋಟ್ಸ್ವಾನ್ಕ್ಕೆ ಭೇಟಿ ನೀಡಿದ್ದ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಈ ಚೀತಾಗಳನ್ನು ಅಲ್ಲಿನ ಅಧ್ಯಕ್ಷ ಡುಮಾ ಗಿಡೋನ್ ಬೋಕೊ ಹಸ್ತಾಂತರ ಮಾಡಿದರು.
ಬೋಟ್ಸ್ವಾನ್ಗೆ ಮುರ್ಮು ಅವರು ಮೂರು ದಿನಗಳ ಪ್ರವಾಸ ಕೈಗೊಂಡಿದ್ದರು. ಪ್ರವಾಸದ ಅಂತಿಮ ದಿನವಾದ ಗುರುವಾರ ಮೊಕೊಲೋಡಿ ಮೀಸಲು ಅರಣ್ಯ ಪ್ರದೇಶದಲ್ಲಿ ಚೀತಾಗಳನ್ನು ಸಾಂಕೇತಿಕವಾಗಿ ಹಸ್ತಾಂತರಿಸಲಾಯಿತು.
ಸಂರಕ್ಷಿತ ಅರಣ್ಯ ಪ್ರದೇಶವನ್ನು ಬೋಕೊ ಅವರ ಜೊತೆಗೂಡಿ ಮುರ್ಮು ಅವರು ಸಫಾರಿ ವಾಹನದಲ್ಲಿ ತೆರಳಿ ವೀಕ್ಷಿಸಿದರು. ಭಾರತ ಮತ್ತು ಬೋಟ್ಸ್ವಾನ್ನ ವನ್ಯಜೀವಿ ಅಧಿಕಾರಿಗಳು ಹಸ್ತಾಂತರ ಪ್ರಕ್ರಿಯೆ ಬಗ್ಗೆ ವಿವರಿಸಿದರು.
ಎಂಟು ಚೀತಾಗಳನ್ನು ಸದ್ಯ ಪ್ರತ್ಯೇಕವಾಗಿರಿಸಲಾಗಿದ್ದು, ಕೆಲವೇ ವಾರಗಳಲ್ಲಿ ಭಾರತಕ್ಕೆ ಸ್ಥಳಾಂತರಗೊಳ್ಳಲಿವೆ. ಎಂಟು ಚೀತಾಗಳಲ್ಲಿ ಮರಿಗಳೂ ಸೇರಿವೆ.
ತಮ್ಮ ಭೇಟಿಯ ನೆನಪಿಗಾಗಿ ಚೀತಾಗಳನ್ನು ಹಸ್ತಾಂತರಿಸುತ್ತಿರುವ ಬೋಟ್ಸ್ವಾನ್ ದೇಶಕ್ಕೆ ಮುರ್ಮು ಅವರು ಧನ್ಯವಾದ ಸಲ್ಲಿಸಿ, ‘ಚೀತಾಗಳನ್ನು ನಾವು ಉತ್ತಮವಾಗಿ ಆರೈಕೆ ಮಾಡುತ್ತೇವೆ’ ಎಂದರು.
‘ಈ ಹಸ್ತಾಂತರವು ಭಾರತದಲ್ಲಿ ಚೀತಾಗಳ ಸಂಖ್ಯೆಯನ್ನು ವೃದ್ಧಿಸಲು ಸಹಕಾರಿಯಾಗಲಿದೆ’ ಎಂದು ಬೋಟ್ಸ್ವಾನ್ ರಾಷ್ಟ್ರಪತಿ ಡುಮಾ ಗಿಡೋನ್ ಬೋಕೊ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.