ಬೀಜಿಂಗ್: ಪಾಕಿಸ್ತಾನದಲ್ಲಿ ಸಂಭವಿಸಿದ ಬಸ್ ದುರಂತದ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡವನ್ನು ಚೀನಾ ಕಳುಹಿಸಿದೆ. 'ಭಯೋತ್ಪಾದಕರ ದಾಳಿ' ಎಂದಿರುವ ಚೀನಾ ತನ್ನ 'ನಂಬಿಕಸ್ಥ ರಾಷ್ಟ್ರ'ದ ಮೇಲೆಯೇ ಅನುಮಾನದ ದೃಷ್ಟಿಯನ್ನು ನೆಟ್ಟಿದೆ.
ಕಳೆದ ಬುಧವಾರ ಪಾಕಿಸ್ತಾನದಲ್ಲಿ ನಡೆದಿದ್ದ ಬಸ್ ದುರಂತದಲ್ಲಿ ಚೀನಾದ 9 ಎಂಜಿನಿಯರ್ಗಳೂ ಸೇರಿದಂತೆ 13 ಮಂದಿ ಮೃತಪಟ್ಟಿದ್ದರು. ಬಸ್ ಸ್ಫೋಟಗೊಂಡು ಸಂಭವಿಸಿದ ಈ ಪ್ರಕರಣವು ಭಯೋತ್ಪಾದಕ ದಾಳಿಯೋ ಅಥವಾ ಅನಿಲ ಸೋರಿಕೆಯಿಂದ ಉಂಟಾದ ಸ್ಫೋಟವೋ ಎಂಬುದರ ಬಗ್ಗೆ ಮಿತ್ರರಾಷ್ಟ್ರಗಳು ಭಿನ್ನಾಭಿಪ್ರಾಯ ಹೊಂದಿವೆ.
ನಿರ್ಮಾಣ ಹಂತದಲ್ಲಿದ್ದ ದಾಸು ಅಣೆಕಟ್ಟು ಇರುವ ಸ್ಥಳಕ್ಕೆ ಚೀನಾದ ಎಂಜಿನಿಯರ್ಗಳು ಮತ್ತು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ ಸ್ಫೋಟಗೊಂಡು ಚೀನಾದ 9 ಪ್ರಜೆಗಳು ಮತ್ತು ಇಬ್ಬರು ಸೈನಿಕರು ಸೇರಿದಂತೆ ಕನಿಷ್ಠ 13 ಜನರು ಸಾವನ್ನಪ್ಪಿದರು. ಅಲ್ಲದೆ, 39 ಮಂದಿ ಗಾಯಗೊಂಡಿದ್ದರು. ಸ್ಫೋಟದ ನಂತರ ಬಸ್ ಆಳವಾದ ಕಂದಕಕ್ಕೆ ಉರುಳಿ ಬಿದ್ದಿತ್ತು.
'ಚೀನಾ ಮತ್ತು ಪಾಕಿಸ್ತಾನ ಜೊತೆಯಾಗಿ ಸತ್ಯಾನ್ವೇಷಣೆ ನಡೆಸಲಿವೆ' ಎಂದು ಚೀನಾದ ಸಾರ್ವಜನಿಕ ಭದ್ರತಾ ಸಚಿವ ಝಾವೊ ಕೆಝಿ ಪಾಕಿಸ್ತಾನದ ಮಂತ್ರಿ ಜೊತೆ ದೂರವಾಣಿಯಲ್ಲಿ ಚರ್ಚಿಸಿದ ಬಳಿಕ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.