ಬೀಜಿಂಗ್: ಗಡಿ ಸಮಸ್ಯೆಗಳಿಗೆ ಸಂಬಂಧಿಸಿ ನ್ಯಾಯಯುತ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಭಾರತದೊಂದಿಗೆ ಕಾರ್ಯನಿರ್ವಹಿಸಲು ಉತ್ಸುಕವಾಗಿರುವುದಾಗಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಗುರುವಾರ ಹೇಳಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಪಿಎಲ್ಎ ವಕ್ತಾರ ಸೀನಿಯರ್ ಕರ್ನಲ್ ವು ಕಿಯಾನ್, ‘ಉಭಯ ದೇಶಗಳ ಬಾಂಧವ್ಯ ಸದೃಢ ಹಾಗೂ ಸ್ಥಿರವಾಗಿ ಇರುವುದನ್ನು ಖಾತ್ರಿಪಡಿಸುವುದಕ್ಕಾಗಿ ಕಾರ್ಯ ನಿರ್ವಹಿಸಲು ಸೇನೆ ಸಿದ್ಧವಾಗಿದೆ’ ಎಂದು ಹೇಳಿದ್ದಾರೆ.
ಪೂರ್ವ ಲಡಾಖ್ ಗಡಿಯಿಂದ ಎರಡೂ ದೇಶಗಳನ್ನು ಯೋಧರನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆಯುವ ಕುರಿತು ಪತ್ರಕರ್ತರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಚೀನಾ ಪ್ರವಾಸದಲ್ಲಿರುವ, ವಿದೇಶಾಂಗ ಸಚಿವಾಲಯ ಜಂಟಿ ಕಾರ್ಯದರ್ಶಿ (ಪೂರ್ವ ಏಷ್ಯಾ) ಗೌರಂಗಲಾಲ್ ದಾಸ್ ನೇತೃತ್ವದ ನಿಯೋಗವು, ಹಲವು ವಿಷಯಗಳ ಕುರಿತು ಚೀನಾ ವಿದೇಶಾಂಗ ಇಲಾಖೆ ಅಧಿಕಾರಿಗಳೊಂದಿಗೆ ಬುಧವಾರ ಚರ್ಚೆ ನಡೆಸಿತು.
ಉಭಯ ದೇಶಗಳ ನಡುವೆ ನೇರ ವಿಮಾನ ಸೇವೆಗೆ ಚಾಲನೆ ನೀಡುವುದು, ಈ ವರ್ಷ ಕೈಲಾಸ ಮಾನಸ ಸರೋವರ ಯಾತ್ರೆ ಆರಂಭಿಸುವುದು ಸೇರಿದಂತೆ ದ್ವಿಪಕ್ಷೀಯ ಸಂಬಂಧ ಬಲಪಡಿಸುವ ಕುರಿತು ಚರ್ಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.