ADVERTISEMENT

ಅಸಮಾನತೆ, ಬಡತನ ಹೆಚ್ಚಿಸಿದ ಕೊರೊನಾ ಸೋಂಕು: ಐಎಂಎಫ್‌

ಪಿಟಿಐ
Published 15 ಅಕ್ಟೋಬರ್ 2021, 5:23 IST
Last Updated 15 ಅಕ್ಟೋಬರ್ 2021, 5:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ‘ಕೋವಿಡ್‌–19‘ ಸಾಂಕ್ರಾಮಿಕದ ರೂಪಾಂತರ ಸೋಂಕು ಅನಿಶ್ಚತತೆಯ ಜೊತೆಗೆ, ಚೇತರಿಸಿ ಕೊಳ್ಳುತ್ತಿದ್ದ ಆರ್ಥಿಕ ಪ್ರಗತಿಯನ್ನು ಚಿವುಟುತ್ತಾ, ಬಡತನ ಮತ್ತು ಅಸಮಾನತೆಯನ್ನು ಉಲ್ಬಣಗೊಳಿಸಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌) ಎಂದು ಹೇಳಿದೆ.

ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳ ಹಣಕಾಸು ಸಚಿವರು ಪಾಲ್ಗೊಂಡಿದ್ದ ವಾರ್ಷಿಕ ಸಭೆಯ ನಂತರ ಐಎಂಎಫ್ ಹೇಳಿಕೆಯಲ್ಲಿ ತಿಳಿಸಿದೆ.

ಕೊರೊನಾ ವೈರಸ್‌ ರೂಪಾಂತರ ಸೋಂಕಿನಿಂದಾಗಿ ಅನಿಶ್ಚತತೆ ಹೆಚ್ಚುವ ಜೊತೆಗೆ, ಚೇತರಿಕೆ ಕಾಣುತ್ತಿದ್ದ ಆರ್ಥಿಕ ಕ್ಷೇತ್ರಕ್ಕೂ ಹಿನ್ನಡೆಯಾಗಿದೆ ಎಂದು ಹೇಳಿಕೆ ತಿಳಿಸಿದೆ.

ADVERTISEMENT

ಕೋವಿಡ್ ಬಿಕ್ಕಟ್ಟು ಬಡತನ ಮತ್ತು ಅಸಮಾನತೆಗಳನ್ನು ಉಲ್ಬಣಗೊಳಿಸುತ್ತಿದೆ. ಹಾಗೆಯೇ, ಹವಾಮಾನ ಬದಲಾವಣೆ ಮತ್ತು ಇತರೆ ಸವಾಲುಗಳನ್ನೂ ಹೆಚ್ಚಿಸುತ್ತಿದೆ. ಈಗ ಅಂತರರಾಷ್ಟ್ರೀಯ ಸಹಕಾರದ ಅವಶ್ಯಕತೆ ಇದೆ. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ತುರ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಐಎಂಎಫ್ ಅಭಿಪ್ರಾಯಪಟ್ಟಿದೆ.

ಕೋವಿಡ್‌–19 ಸಾಂಕ್ರಾಮಿಕ ರೋಗ ನಿಯಂತ್ರಣ ಸಂಬಂಧ ವಿಶ್ವದಾದ್ಯಂತ ನಡೆಯುತ್ತಿರುವ ಲಸಿಕೆ ನೀಡಿಕೆ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ನೀಡುವ ಜೊತೆಗೆ ತುರ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದೂ ಐಎಂಎಫ್‌ ತಿಳಿಸಿದೆ.

‘ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಲಸಿಕೆಗಳು, ಅಗತ್ಯ ವೈದ್ಯಕೀಯ ಉತ್ಪನ್ನಗಳು ಹಾಗೂ ಇನ್ನಿತರ ವಸ್ತುಗಳ ಸರಬರಾಜನ್ನು ಹೆಚ್ಚಿಸುವುದಾಗಿ ಐಎಂಎಫ್ ಭರವಸೆ ನೀಡಿದೆ. ಅಷ್ಟೇ ಅಲ್ಲ, 2021ರ ಅಂತ್ಯದೊಳಗೆ ಎಲ್ಲಾ ದೇಶಗಳಲ್ಲಿ ಕನಿಷ್ಠ ಶೇ 40 ರಷ್ಟು ಹಾಗೂ 2022ರ ಮಧ್ಯ ಭಾಗದ ವೇಳೆ ದೇಶದ ಜನಸಂಖ್ಯೆಯ ಶೇ 70 ಭಾಗಷ್ಟು ಜನರಿಗೆ ಲಸಿಕೆ ನೀಡುವ ಜಾಗತಿಕ ಗುರಿ ತಲುಪಲು ಇರುವ ಆರ್ಥಿಕ ಸಮಸ್ಯೆ ಮತ್ತು ನಿರ್ಬಂಧಗಳನ್ನು ಐಎಂಎಫ್‌ ಭರವಸೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.