ಜಬೀವುಲ್ಲಾ ಮುಜಾಹಿದ್
ನವದೆಹಲಿ: ಅಫ್ಗಾನ್ ಇಸ್ಲಾಮಿಕ್ ಎಮಿರೇಟ್ ಪಡೆಗಳು ವಿವಾದಿತ ಡ್ಯುರಾಂಡ್ ರೇಖೆಯ ಉದ್ದಕ್ಕೂ ಪಾಕಿಸ್ತಾನಿ ಭದ್ರತಾ ಪಡೆಗಳ ವಿರುದ್ಧ ದಾಳಿ ನಡೆಸಿವೆ ಎಂದು ತಾಲಿಬಾನ್ ಸರ್ಕಾರದ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ.
ಕಾರ್ಯಾಚರಣೆ ವೇಳೆ 58 ಪಾಕ್ ಯೋಧರು ಮೃತಪಟ್ಟಿದ್ದು, 30 ಮಂದಿ ಗಾಯಗೊಂಡಿದ್ದಾರೆ. ಪಾಕ್ ಸೈನಿಕರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ, 20 ಪಾಕ್ ಭದ್ರತಾ ಶಿಬಿರಗಳನ್ನು ನಾಶಪಡಿಸಲಾಗಿದೆ ಎಂದು ಮುಜಾಹಿದ್ ತಿಳಿಸಿದ್ದಾರೆ.
ಪಾಕ್ ನಡೆಸಿದ ದಾಳಿಯಲ್ಲಿ ನಮ್ಮ (ಅಫ್ಗಾನ್) ಒಂಬತ್ತು ಯೋಧರು ಸಾವಿಗೀಡಾಗಿದ್ದು, 16 ಜನರು ಗಾಯಗೊಂಡಿದ್ದಾರೆ. ಕತಾರ್ ಮತ್ತು ಸೌದಿ ಅರೇಬಿಯಾದ ಮನವಿ ಬೆನ್ನಲ್ಲೇ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು ಎಂದು ಮುಜಾಹಿದ್ ವಿವರಿಸಿದ್ದಾರೆ.
ಪಾಕಿಸ್ತಾವುದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಇಸ್ಲಾಮಿಕ್ ಸ್ಟೇಟ್ ಅಂಗಸಂಸ್ಥೆ ಐಸಿಸ್-ಕೆ ತರಬೇತಿ ಕೇಂದ್ರಗಳನ್ನು ಹೊಂದಿದೆ. ಇರಾನ್ ಮತ್ತು ಮಾಸ್ಕೊದಲ್ಲಿ ನಡೆಸಿದ ದಾಳಿಗಳನ್ನು ಈ ಕೇಂದ್ರಗಳಿಂದಲೇ ಆಯೋಜಿಸಲಾಗಿದೆ. ಅಫ್ಗಾನಿಸ್ತಾನದಲ್ಲಿ ನಡೆದ ಇತ್ತೀಚಿನ ದಾಳಿಗಳನ್ನು ಸಹ ಈ ನೆಲೆಗಳಿಂದಲೇ ಯೋಜಿಸಲಾಗಿತ್ತು ಎಂದು ಮುಜಾಹಿದ್ ಆರೋಪಿಸಿದ್ದಾರೆ.
ಪಾಕಿಸ್ತಾನವು ಕಾಬೂಲ್ಗೆ ತನ್ನ ನಿಯೋಗವನ್ನು ಕಳುಹಿಸಲು ಪ್ರಯತ್ನಿಸಿದೆ. ಆದರೆ, ಗುರುವಾರ ರಾತ್ರಿ ನಡೆಸಿದ ಪಾಕಿಸ್ತಾನಿ ವೈಮಾನಿಕ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಇಸ್ಲಾಮಿಕ್ ಎಮಿರೇಟ್ ಈ ಪ್ರಸ್ತಾಪವನ್ನು ತಿರಸ್ಕರಿಸಿತ್ತು.
ಅಫ್ಗಾನಿಸ್ತಾನದ ಸಾರ್ವಭೌಮತ್ವದ ಯಾವುದೇ ಉಲ್ಲಂಘನೆಗೆ ಉತ್ತರಿಸದೆ ಸುಮ್ಮನೆ ಇರುವುದಿಲ್ಲ. ಗಡಿಯುದ್ದಕ್ಕೂ ತನ್ನ ಪ್ರದೇಶವನ್ನು ರಕ್ಷಿಸಿಕೊಳ್ಳುವ ಬಗ್ಗೆ ತಾಲಿಬಾನ್ನ ನಿಲುವನ್ನು ಮುಜಾಹಿದ್ ಪುನರುಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.