ADVERTISEMENT

'ಟಿಪ್ಪು ಗನ್‌' ರಫ್ತಿಗೆ ನಿಷೇಧ ಹೇರಿದ ಬ್ರಿಟನ್ ಸರ್ಕಾರ

ಪಿಟಿಐ
Published 29 ಮೇ 2023, 16:06 IST
Last Updated 29 ಮೇ 2023, 16:06 IST
ಈಗ ಲಂಡನ್‌ನಲ್ಲಿರುವ, ಬೇಟೆಗಾಗಿ ಟಪ್ಪು ಸುಲ್ತಾನ್ ಅವರಿಗಾಗಿಯೇ ತಯಾರಿಸಲಾಗಿದ್ದ ಗನ್ –ಪಿಟಿಐ ಚಿತ್ರ 
ಈಗ ಲಂಡನ್‌ನಲ್ಲಿರುವ, ಬೇಟೆಗಾಗಿ ಟಪ್ಪು ಸುಲ್ತಾನ್ ಅವರಿಗಾಗಿಯೇ ತಯಾರಿಸಲಾಗಿದ್ದ ಗನ್ –ಪಿಟಿಐ ಚಿತ್ರ    

ಲಂಡನ್‌ : ‘ಮೈಸೂರು ಹುಲಿ’ ಟಿಪ್ಪು ಸುಲ್ತಾನನಿಗಾಗಿಯೇ ಭಾರತದಲ್ಲಿ ವಿಶೇಷವಾಗಿ ತಯಾರಿಸಿದ್ದ ಆಕರ್ಷಕ ವಿನ್ಯಾಸದ ಗನ್‌ ಈಗ ಇಂಗ್ಲೆಂಡ್‌ನ ವ್ಯಕ್ತಿಯೊಬ್ಬರ (ಈಗಿನ ಅಂದಾಜು ಮೌಲ್ಯ ₹ 2.04 ಕೋಟಿ) ಸಂಗ್ರಹದಲ್ಲಿದ್ದು, ಅದನ್ನು ರಫ್ತು ಮಾಡದಂತೆ ಬ್ರಿಟನ್‌ ಸರ್ಕಾರ ನಿಷೇಧ ಹೇರಿದೆ. 

ಭಾರತ ಮತ್ತು ಇಂಗ್ಲೆಂಡ್‌ ಇತಿಹಾಸ ಮತ್ತು ‘ಹೋರಾಟದ ಅವಧಿ’ಯ ಸಾರ್ವಜನಿಕ ಅಧ್ಯಯನದ ಉದ್ದೇಶಕ್ಕಾಗಿ ಬ್ರಿಟನ್‌ ಮೂಲದ ಸಂಸ್ಥೆಗೆ ಈ ಗನ್ ಅನ್ನು ಸ್ವಾಧೀನಕ್ಕೆ ಪಡೆಯಲು ಸಮಯಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

‘ಫ್ಲಿಂಟ್‌ಲಾಕ್‌ ಸ್ಪೋರ್ಟಿಂಗ್‌ ಗನ್’ನ ವಿಲೇವಾರಿಗೆ ನಿಷೇಧ ಹೇರುವ ತೀರ್ಮಾನವನ್ನು ಬ್ರಿಟನ್‌ನ ಕಲಾ ಮತ್ತು ಪಾರಂಪರಿಕ ಸಚಿವ ಲಾರ್ಡ್‌ ಸ್ಟೀಫನ್‌ ಪಾರ್ಕಿನ್‌ಸನ್‌ ಅವರು ಕಳೆದ ವಾರ ತೆಗೆದುಕೊಂಡಿದ್ದಾರೆ. ಸಾಂಸ್ಕೃತಿಕ ಮಹತ್ವದ ಕಲೆ ಮತ್ತು ಪರಿಕರಗಳ ರಫ್ತು ಕುರಿತ ಪರಿಶೀಲನಾ ಸಮಿತಿಯು (ಆರ್‌ಸಿಇಡಬ್ಲ್ಯುಎ) ಈ ಬಗ್ಗೆ ವರದಿ ಸಲ್ಲಿಸಿತ್ತು.

ADVERTISEMENT

14 ಬೋರ್‌ನ ಈ ಗನ್ ಅನ್ನು 1793 ಮತ್ತು 1794ರ ನಡುವೆ ತಯಾರಿಸಲಾಗಿದೆ. ಹಕ್ಕಿಗಳ ಶೂಟ್‌ ಮಾಡುವ ಉದ್ದೇಶಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಈ ಗನ್‌ನ ಮೇಲೆ ಅದನ್ನು ತಯಾರಿಸಿರುವ ಅಸದ್‌ ಖಾನ್‌ ಮೊಹಮ್ಮದ್ ಅವರ ಹಸ್ತಾಕ್ಷರವಿದೆ. ಒಟ್ಟು 138 ಸೆಂಟಿ ಮೀಟರ್ ಉದ್ದದ ಈ ಗನ್ ಅನ್ನು ತಯಾರಿಸಲು ಗುಣಮಟ್ಟದ ಮರದ ಕೆತ್ತನೆ ಬಳಸಲಾಗಿದ್ದು, ಅದರ ಮೇಲೆ ಚಿನ್ನ ಮತ್ತು ಬೆಳ್ಳಿಯ ಲೇಪನವಿದೆ. ಬೆಳ್ಳಿಯ ಹಿಡಿಕೆ ಮತ್ತು ಸ್ಟೀಲ್‌ ಬ್ಯಾರಲ್‌ ಅನ್ನು ಗನ್‌ ಒಳಗೊಂಡಿದೆ. 

ಬ್ರಿಟಿಷ್‌ ವಸಾಹತುಶಾಹಿ ಕಾಲಘಟ್ಟದ ಈ ಗನ್ ಅನ್ನು 1790 ಮತ್ತು 1792ರ ಅವಧಿಯಲ್ಲಿ ಟಿಪ್ಪು ಸುಲ್ತಾನ್‌ ವಿರುದ್ಧ ಹೋರಾಡಿದ್ದ ಬ್ರಿಟಿಷ್‌ ಸೇನೆಯ ಜನರಲ್‌ ಅರ್ಲ್‌ ಕಾರ್ನ್‌ವಾಲಿಸ್ ಅವರಿಗೆ ಉಡುಗೊರೆ ನೀಡಲಾಗಿತ್ತು ಎಂದು ಹೇಳಲಾಗಿದೆ.

‘ಆಕರ್ಷಕವಾಗಿರುವ ಈ ಶಸ್ತ್ರ ತನ್ನ ಪ್ರಾಚೀನತೆಯ ಕಾರಣದಿಂದಲೇ ಹೆಚ್ಚು ಮಹತ್ವದ್ದಾಗಿದೆ. ಬ್ರಿಟನ್‌ ಮತ್ತು ಭಾರತದ ನಡುವಿನ ಇತಿಹಾಸವನ್ನು ಅರಿಯಲು ಮುಖ್ಯವಾದ ಸಂಪರ್ಕ ಕೊಂಡಿಯಾಗಿದೆ’ ಎಂದು ಸಚಿವ ಲಾರ್ಡ್ ಪಾರ್ಕಿನ್‌ಸನ್‌ ಅವರು ಅಭಿಪ್ರಾಯಪಟ್ಟರು.

‘ಉಭಯ ರಾಷ್ಟ್ರಗಳು ಹೋರಾಟ ಕಾಲದ ಚಿತ್ರಣ, ಇತಿಹಾಸವನ್ನು ಆಳವಾಗಿ ಅರಿತುಕೊಳ್ಳಲು ಈ ಶಸ್ತ್ರವನ್ನು ಸಾಧ್ಯವಾದಷ್ಟು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಬೇಕು’ ಎಂದೂ ಅವರು ಸಲಹೆ ನೀಡಿದರು.

ಮೈಸೂರಿನ ಹುಲಿ ಎಂದೇ ಹೆಸರಾಗಿದ್ದ ಟಿಪ್ಪು ಸುಲ್ತಾನ್, ಬ್ರಿಟಿಷ್‌ನ ಈಸ್ಟ್‌ ಇಂಡಿಯಾ ಕಂಪನಿಯ ಬದ್ಧ ವಿರೋಧಿಯಾಗಿದ್ದರು. ಮೈಸೂರು ಪ್ರಾಂತ್ಯದ ಶ್ರೀರಂಗಪಟ್ಟಣ ಹಾಗೂ ಆಸುಪಾಸಿನ ಪ್ರದೇಶಗಳ ಅತಿಕ್ರಮಣ ವಿರುದ್ಧ ನಡೆದ ಹೋರಾಟದಲ್ಲಿ ಅವರು 1799ರ ಮೇ 4ರಂದು ಹತರಾಗಿದ್ದರು.

ಟಿಪ್ಪು ಹತನಾದ ಹಿಂದೆಯೇ ಅವರ ಸುಪರ್ದಿಯಲ್ಲಿದ್ದ ವೈಯಕ್ತಿಕ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದ ಬ್ರಿಟಿಷ್‌ ಸೇನೆಯು, ಆಗ ಸೇನೆಯಲ್ಲಿ ಪ್ರಮುಖ ಸ್ಥಾನದಲ್ಲಿದ್ದವರಿಗೆ ಕೊಡುಗೆಯಾಗಿ ನೀಡಿತ್ತು. ಟಿಪ್ಪುವಿನ ಖಡ್ಗವು ಇತ್ತೀಚಿಗೆ ಲಂಡನ್‌ನಲ್ಲಿ ದಾಖಲೆಯ ₹ 143 ಕೋಟಿಗೆ ಹರಾಜು ಆಗಿತ್ತು. 

ಟಿಪ್ಪು ಸುಲ್ತಾನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.