
ಜೊಹಾನಸ್ಬರ್ಗ್: ಮಾದಕವಸ್ತು ಕಳ್ಳಸಾಗಾಣಿಕೆ ತಡೆ, ಭಯೋತ್ಪಾದನೆ ನಿಯಂತ್ರಣ, ಜಾಗತಿಕ ಆರೋಗ್ಯ ರಕ್ಷಣೆ ತುರ್ತು ಸ್ಪಂದನಾ ತಂಡ ರಚಿಸುವುದು ಸೇರಿದಂತೆ ಶನಿವಾರ ಇಲ್ಲಿ ಆರಂಭಗೊಂಡ ಜಿ-20 ನಾಯಕರ ಶೃಂಗಸಭೆಯ ಆರಂಭಿಕ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ಉಪಕ್ರಮಗಳನ್ನು ಮುಂದಿಟ್ಟಿದ್ದಾರೆ.
ಅಮೆರಿಕದ ವಿರೋಧದ ನಡುವೆಯೇ ಜಿ20 ಶೃಂಗಸಭೆಯ ಆರಂಭಿಕ ಘೋಷಣೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ದಕ್ಷಿಣ ಆಫ್ರಿಕಾ ಹೇಳಿದೆ.
ಎಲ್ಲರನ್ನೂ ಒಳಗೊಂಡ, ಎಲ್ಲರಿಗೂ ಉತ್ತಮ ಭವಿಷ್ಯವನ್ನು ಖಚಿತಪಡಿಸುವ ಪರಿಸರ ಸಮತೋಲಿತ, ಸಾಂಸ್ಕೃತಿಕವಾಗಿ ಶ್ರೀಮಂತವಾದ ಮತ್ತು ಸಾಮಾಜಿಕವಾಗಿ ಒಗ್ಗಟ್ಟಿನ ‘ಜಾಗತಿಕ ಸಾಂಪ್ರದಾಯಿಕ ಜ್ಞಾನ ಭಂಡಾರ ರಚನೆ’ಯ ಅಗತ್ಯವನ್ನು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ವಿವರಿಸಿದರು.
‘ನಮ್ಮ ಅಭಿವೃದ್ಧಿಯ ಮಾನದಂಡಗಳನ್ನು ಮರು ಪರಿಶೀಲಿಸಿಕೊಳ್ಳಲು ಇದು ಸಕಾಲ. ಜಾಗತಿಕ ಜ್ಞಾನ ಭಂಡಾರ ರಚನೆಗೆ ಭಾರತದ ನಾಗರಿಕತೆಯ ಮೌಲ್ಯಗಳು ಮತ್ತು ಮಹಾನ್ ಮಾನವತಾವಾದದ ತತ್ವಗಳು ಮಾರ್ಗದರ್ಶಿಯಾಗಿವೆ. ಸುಸ್ಥಿರ ಆರ್ಥಿಕ ಅಭಿವೃದ್ಧಿ ಎಂದರೆ ಅದು ಎಲ್ಲರನ್ನೂ ಒಳಗೊಂಡಿರಬೇಕು, ಯಾರೂ ಪ್ರಗತಿಯ ಹಾದಿಯಲ್ಲಿ ಹಿಂದುಳಿಯಬಾರದು’ ಎಂದು ಅವರು ಪ್ರತಿಪಾದಿಸಿದರು.
ಜಾಗತಿಕ ಅಭಿವೃದ್ಧಿಗೆ, ಆಫ್ರಿಕಾದ ಪ್ರಗತಿಯೂ ಅತ್ಯಗತ್ಯ. ಇದಕ್ಕಾಗಿ ಆಫ್ರಿಕಾದಲ್ಲಿ ಮುಂದಿನ ಒಂದು ದಶಕದಲ್ಲಿ 10 ಲಕ್ಷ ಕೌಶಲ ತರಬೇತಿದಾರರನ್ನು ಸಿದ್ಧಗೊಳಿಸಲು ಜಿ20 ದೇಶಗಳ ಸಹಯೋಗದಲ್ಲಿ ಉಪಕ್ರಮವೊಂದನ್ನು ರೂಪಿಸಲಾಗಿದೆ ಎಂದರು.
ನೈಸರ್ಗಿಕ ವಿಕೋಪಗಳೂ ಸೇರಿದಂತೆ ಜಾಗತಿಕ ಮಟ್ಟದ ಆರೋಗ್ಯ ತುರ್ತು ಎದುರಾದಾಗ ನಾವು ಒಟ್ಟಿಗೆ, ಕ್ಷಿಪ್ರಗತಿಯಲ್ಲಿ ಕಾರ್ಯನಿರ್ವಹಿಸಬೇಕು. ಇದಕ್ಕಾಗಿ ‘ಜಿ20 ದೇಶಗಳ ಆರೋಗ್ಯ ರಕ್ಷಣೆ ತುರ್ತು ಸ್ಪಂದನಾ ತಂಡವನ್ನು ರಚಿಸಬೇಕು’ ಎಂದೂ ಅವರು ಹೇಳಿದರು.
ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್ ಸೇರಿದಂತೆ ಪ್ರಮುಖ ನಾಯಕರೊಂದಿಗೆ ಮೋದಿ ಮಾತುಕತೆ ನಡೆಸಿದರು.
ಭಾರತದ ಸಾಂಪ್ರದಾಯಿಕ ಜ್ಞಾನವು ಜಾಗತಿಕವಾಗಿ ಎಲ್ಲರಿಗೂ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮವನ್ನು ಖಚಿತಪಡಿಸುತ್ತದೆಪ್ರಧಾನಿ ನರೇಂದ್ರ ಮೋದಿ ಎಕ್ಸ್ ಪೋಸ್ಟ್ನಲ್ಲಿ
‘ಅನಿಷ್ಟ ತೊಡೆದುಹಾಕೋಣ’
‘ಜಾಗತಿಕ ಬೆದರಿಕೆಯಾಗಿರುವ ಭಯೋತ್ಪಾದನೆ ಅತ್ಯಂತ ಅಪಾಯಕಾರಿಯಾದ ಫೆಂಟನಿಲ್ ಮಾದಕವಸ್ತು ಕಳ್ಳಸಾಗಾಣಿಕೆ ತಡೆಯಲು ಜಿ20 ಶೃಂಗಸಭೆಯು ಪರಿಹಾರ ಕಂಡುಕೊಳ್ಳಬೇಕು. ಆ ಮೂಲಕ ನಾವು ಮಾದಕವಸ್ತು–ಭಯೋತ್ಪಾದನಾ ಆರ್ಥಿಕತೆ ಎಂಬ ಅನಿಷ್ಟವನ್ನು ತೊಡೆದುಹಾಕೋಣ’ ಎಂದು ಪ್ರಧಾನಿ ಮನವಿ ಮಾಡಿದರು. ಶಾಶ್ವತ ಶಾಂತಿಗೆ ಆಗ್ರಹ ‘ಉಕ್ರೇನ್ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ (ಡಿಆರ್ಸಿ) ಸುಡಾನ್ ಮತ್ತು ಆಕ್ರಮಿತ ಪ್ಯಾಲೆಸ್ಟೀನ್ ಪ್ರದೇಶದಲ್ಲಿ ನ್ಯಾಯಯುತ ಸಮಗ್ರ ಮತ್ತು ಶಾಶ್ವತ ಶಾಂತಿ ನೆಲೆಗೊಳ್ಳಬೇಕು’ ಎಂದು ಜಿ20 ನಾಯಕರು ಆಗ್ರಹಿಸಿದ್ದಾರೆ.
ಸಭೆ ಬಹಿಷ್ಕರಿಸಿದ್ದ ಅಮೆರಿಕ
ಜಿ20 ಶೃಂಗಸಭೆಯ ಆತಿಥ್ಯ ವಹಿಸುವ ದಕ್ಷಿಣಾ ಆಫ್ರಿಕಾದೊಂದಿಗಿನ ರಾಜತಾಂತ್ರಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಮೆರಿಕವು ಶೃಂಗಸಭೆಯನ್ನು ಬಹಿಷ್ಕರಿಸಿತ್ತು. ಅಮೆರಿಕದ ಅನುಪಸ್ಥಿತಿಯಲ್ಲಿ ಜಿ20 ಸಭೆಯ ಘೋಷಣೆಯನ್ನು ಅಂಗೀಕರಿಸದಂತೆಯೂ ಒತ್ತಡ ಹೇರಿತ್ತು. ಸಾಮಾನ್ಯವಾಗಿ ಜಿ20 ಶೃಂಗಸಭೆಯ ಘೋಷಣೆಯನ್ನು ಕೊನೆಯ ದಿನ ಅಂಗೀಕರಿಸಲಾಗುತ್ತದೆ. ಆದರೆ ಈ ಬಾರಿ ಈ ಸಂಪ್ರದಾಯವನ್ನು ಮುರಿದು ಮೊದಲ ದಿನವೇ ಜಿ20 ನಾಯಕರು ಒಮ್ಮತದಿಂದ ಪ್ರಸ್ತಾವಗಳನ್ನು ಅಂಗೀಕರಿಸಿದ್ದಾರೆ. ‘ಘೋಷಣೆಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ’ ಎಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರ ವಕ್ತಾರ ವಿನ್ಸೆಂಟ್ ಮಗ್ವೆನ್ಯಾ ತಿಳಿಸಿದ್ದಾರೆ. ಹವಾಮಾನ ವೈಪರೀತ್ಯ ಹಸಿರು ಇಂಧನ ಜಾಗತಿಕ ಅಸಮಾನತೆ ನಿವಾರಣೆ ವಿದೇಶಿ ಸಾಲದ ಹೊರೆಯನ್ನು ಕಡಿಮೆ ಮಾಡುವುದೂ ಸೇರಿದಂತೆ ಹಲವು ಅಂಶಗಳ ಕುರಿತು ಜಿ20 ಶೃಂಗಭೆಯಲ್ಲಿ ಚರ್ಚೆ ನಡೆಸಬೇಕು ಎಂದು ದಕ್ಷಿಣ ಆಫ್ರಿಕಾ ಆಗ್ರಹಿಸಿದೆ. ಆದರೆ ದಕ್ಷಿಣಾ ಆಫ್ರಿಕಾದ ಈ ಪ್ರಸ್ತಾವಗಳನ್ನು ಅಮೆರಿಕ ವಿರೋಧಿಸಿತ್ತು. ‘ನಮ್ಮನ್ನು ಬೆದರಿಸಲು ಆಗುವುದಿಲ್ಲ’ ಎಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಟ್ರಂಪ್ಗೆ ಉತ್ತರ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.