ADVERTISEMENT

ಉಗ್ರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಪಾಕ್‌ಗೆ ಸೂಚಿಸಲು ಇದು ಸಕಾಲ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂತರರಾಷ್ಟ್ರೀಯ ಸಮುದಾಯಗಳಿಗೆ ಒತ್ತಾಯ

ಪಿಟಿಐ
Published 29 ಜೂನ್ 2021, 7:22 IST
Last Updated 29 ಜೂನ್ 2021, 7:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಿಶ್ವಸಂಸ್ಥೆ: ‘ತಮ್ಮ ನೆಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಗ್ರ ಸಂಘಟನೆಗಳ ವಿರುದ್ಧ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಅಂತರರಾಷ್ಟ್ರೀಯ ಸಮುದಾಯಗಳು ಪಾಕಿಸ್ತಾನಕ್ಕೆ ಸೂಚಿಸಲು ಇದು ಸೂಕ್ತ ಸಮಯವಾಗಿದೆ‘ ಎಂದು ಭಾರತ, ವಿಶ್ವಸಂಸ್ಥೆ ಸಾಮಾನ್ಯ ಸಭೆಗೆ ತಿಳಿಸಿದೆ.

ಜಮ್ಮುವಿನಲ್ಲಿ ನಡೆದ ಉಗ್ರರ ಚಟುವಟಿಕೆಯ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ವಿರುದ್ಧ ಹರಿಹಾಯ್ದ ಭಾರತ ಸರ್ಕಾರದ ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿ (ಆಂತರಿಕ ಭದ್ರತೆ) ವಿ.ಎಸ್‌. ಕೌಮುದಿ, ‘ಈ ವಿಷಯದಲ್ಲಿ ಪಾಕಿಸ್ತಾನ ಸುಳ್ಳುಗಳೇ ತುಂಬಿರುವ ನೈತಿಕತೆಯ ಹಾದಿಯಲ್ಲಿ ಸಾಗುವುದನ್ನು ಬಿಡಬೇಕು‘ ಎಂದು ಒತ್ತಾಯಿಸಿದ್ದಾರೆ.

‘ಭಾರತದ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ಪಾಕಿಸ್ತಾನದ ವಿರುದ್ಧ ಹರಿಯಾಯ್ದ ಕೌಮುದಿ, ‘ನಿರೀಕ್ಷೆಯಂತೆ, ಪಾಕಿಸ್ತಾನದ ನಿಯೋಗದವರು, ಭಾರತದ ವಿರುದ್ಧ ಮತ್ತದೇ ಸುಳ್ಳು ಹಾಗೂ ಆಧಾರ ರಹಿತವಾದ ಆರೋಪಗಳನ್ನು ಮಾಡುತ್ತಿದ್ದಾರೆ‘ ಎಂದು ಕೌಮುದಿ ದೂರಿದ್ದಾರೆ.

ADVERTISEMENT

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿನ ಸದಸ್ಯ ರಾಷ್ಟ್ರಗಳ ಭಯೋತ್ಪಾದಕ ನಿಗ್ರಹ ಸಂಸ್ಥೆಗಳ ಮುಖ್ಯಸ್ಥರ 2ನೇ ಉನ್ನತ ಮಟ್ಟದ ಸಮಾವೇಶದಲ್ಲಿ ‘ಭಯೋತ್ಪಾದನೆಯ ಜಾಗತಿಕ ಉಪದ್ರವ: ಹೊಸ ದಶಕಗಳಲ್ಲಿ ಪ್ರಸ್ತುತ ಎದುರಿಸುತ್ತಿರುವ ಬೆದರಿಕೆಗಳು ಮತ್ತು ಬೆದರಿಕೆಗಳಿಗೆ ಬಳಸುತ್ತಿರುವ ಹೊಸ ವಿಧಾನಗಳ ಮೌಲ್ಯಮಾಪನ’ ಕುರಿತು ಕೌಮುದಿ ಮಾತನಾಡಿದರು.

‘ತನ್ನ ದೇಶದ ಅಲ್ಪಸಂಖ್ಯಾತರ ವಿರುದ್ಧ ಪಂಥೀಯ ಹಿಂಸಾಚಾರದಲ್ಲಿ ತೊಡಗಿರುವ ಮತ್ತು ಭಾರತದ ಬಗ್ಗೆ ಆಳವಾದ ಅಭದ್ರತೆ ಮತ್ತು ದ್ವೇಷವನ್ನೇ ಮೈಗೂಡಿಸಿಕೊಂಡಿರುವ ಈ ರಾಷ್ಟ್ರದ ನಿಯೋಗದಿಂದ ನಾವು ಹೊಸತೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ‘ ಎಂದು ಕೌಮುದಿ, ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.