ಹಾಂಗ್ ಕಾಂಗ್: ಶಂಕಿತ ಅಪರಾಧಿಗಳನ್ನು ವಿಚಾರಣೆಗಾಗಿ ಚೀನಾಕ್ಕೆ ಕಳುಹಿಸುವ ವಿವಾದಾತ್ಮಕ ಮಸೂದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಅಂತ್ಯಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಚೀನಾಪರ ನಾಯಕಿ ಕ್ಯಾರಿ ಲಾಮ್ ಅವರು ‘ಮಸೂದೆ ಸತ್ತುಹೋಗಿದೆ’ ಎಂದು ಹೇಳಿದ್ದರೂ ಸರ್ಕಾರಿ ವಿರೋಧಿ ಪ್ರತಿಭಟನಕಾರರ ಆಕ್ರೋಶ ತಣ್ಣಗಾಗುತ್ತಿಲ್ಲ. ಅವರ ಹೇಳಿಕೆಯನ್ನು ನಂಬದ ಪ್ರತಿಭಟನಕಾರರು ಮತ್ತಷ್ಟು ದೊಡ್ಡ ಮಟ್ಟದ ರ್ಯಾಲಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹಾಂಗ್ಕಾಂಗ್ನಲ್ಲಿ ಕಳೆದ ತಿಂಗಳಿನಿಂದೀಚೆಗೆ ಬೃಹತ್ ಪ್ರತಿಭಟನೆಗಳು ನಡೆದಿವೆ. ಪೊಲೀಸರ ಜತೆ ಸಂಘರ್ಷಗಳಿಗೆ ನಗರ ಸಾಕ್ಷಿಯಾಗಿದೆ.
‘ಮಸೂದೆಯನ್ನು ಪರಿಚಯಿಸುವುದಲ್ಲಿ ತಮ್ಮ ಆಡಳಿತ ವಿಫಲವಾಗಿದೆ’ ಎಂದು ಹಾಂಗ್ಕಾಂಗ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ಯಾರಿ ಲಾಮ್ ಅವರು ಒಪ್ಪಿಕೊಂಡಿದ್ದಾರೆ. ಸಂಸತ್ತಿನಲ್ಲಿ ತಮ್ಮ ಸರ್ಕಾರ ಮತ್ತೊಮ್ಮೆ ಈ ಮಸೂದೆ ಬಗ್ಗೆ ಸಕ್ರಿಯವಾಗುವುದಿಲ್ಲ ಎಂದು ಹೇಳಿದ್ದಾರೆ.
‘ಅಂತಹ ಯಾವುದೇ ಯೋಜನೆ ಇಲ್ಲ. ಮಸೂದೆ ಸತ್ತು ಹೋಗಿದೆ’ ಎಂದು ಅವರು ವಿವರಿಸಿದ್ದಾರೆ.
ಆದರೆ ಮಸೂದೆಯನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆಯಲು ಕ್ಯಾರಿ ನಿರಾಕರಿಸಿದ್ದಾರೆ. ಇದು ಸರ್ಕಾರಿ ವಿರೋಧಿ ಪ್ರತಿಭಟನಕಾರರನ್ನು ಪ್ರಚೋದಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.