ಮಾಸ್ಕೊ:‘ವಿಮಾನವು ರನ್ವೇನಲ್ಲಿ ವೇಗವಾಗಿ ಚಲಿಸುತ್ತಿತ್ತು. ಕ್ಯಾಬಿನ್ ಕಿಟಿಕಿ ಬಿಸಿಯಾಗಿ ಕರಗುತ್ತಿದೆ ಎಂದು ಕೆಲವರು ಹೇಳಿದರು. ಅಷ್ಟರಲ್ಲಿ ವಿಮಾನವು ನಿಲ್ದಾಣದತ್ತ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಪೈಲಟ್ ಘೋಷಿಸಿದರು. ಆದರೆ, ವಿಮಾನದ ಸಂವಹನ ವ್ಯವಸ್ಥೆ ದುರ್ಬಲಗೊಂಡಿತ್ತು. ಸಿಗ್ನಲ್ ವ್ಯವಸ್ಥೆಯೂ ಕಾರ್ಯನಿರ್ವಹಿಸುತ್ತಿರಲಿಲ್ಲ. ಹಠಾತ್ ಭೀತಿ, ಉದ್ವೇಗಕ್ಕೊಳಗಾಗಿದ್ದ ಪ್ರಯಾಣಿಕರು ವಿಮಾನ ವೇಗವಾಗಿ ಚಲಿಸುತ್ತಿರುವಾಗಲೇ ಆಸನಗಳನ್ನು ಬಿಟ್ಟು ಹೌಹೌರಿ ಮುಂದಕ್ಕೆ ಓಡಿ ಬರುತ್ತಿದ್ದರು...’
ಭಾನುವಾರ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಸಂಭವಿಸಿದ ವಿಮಾನ ದುರಂತದ ಆತಂಕದ ಕ್ಷಣಗಳನ್ನು ಗಗನಸಖಿ ತಸ್ಯಾನ ಕಸ್ಟಕಿನಾ ವಿವರಿಸಿದ ಪರಿಯಿದು.
ರಷ್ಯಾ ನಿರ್ಮಿತ ‘ಸುಖೊಯ್ ಸೂಪರ್ ಜೆಟ್–100’ ವಿಮಾನ ಷೆರೆಮೆಟ್ಯೆವೊ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಸಿಬ್ಬಂದಿ ಅಪಾಯದ ಸಂದೇಶ ನೀಡಿದ್ದರು. ಮೊದಲ ಬಾರಿ ತುರ್ತು ಭೂಸ್ಪರ್ಶ ಮಾಡುವ ಪ್ರಯತ್ನ ವಿಫಲವಾಗಿತ್ತು. ಎರಡನೇ ಬಾರಿ ಭೂಸ್ಪರ್ಶ ಮಾಡಿದಾಗ ಬೆಂಕಿ ತಗುಲಿತ್ತು. ಘಟನೆಯಲ್ಲಿಇಬ್ಬರು ಮಕ್ಕಳೂ ಸೇರಿ 41 ಜನರು ಮೃತಪಟ್ಟು, ಹಲವರು ಗಾಯಗೊಂಡಿದ್ದರು.37 ಮಂದಿ ಅಪಾಯದಿಂದ ಪಾರಾಗಿದ್ದರು.
ಇದನ್ನೂ ಓದಿ:ಮಾಸ್ಕೊದಲ್ಲಿ ವಿಮಾನಕ್ಕೆ ಬೆಂಕಿ: 41 ಸಾವು
ಸ್ಥಳೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವತಸ್ಯಾನ ‘ಟೇಕಾಫ್ ಆದ 10 ನಿಮಿಷಗಳಲ್ಲಿ ವಿಮಾನಕ್ಕೆ ಸಿಡಿಲು ಬಡಿಯಿತು. ಹೊರಗಡೆ ಭಾರಿ ಸದ್ದು ಕೇಳಿಸಿತು. ಮಹಿಳೆಯೊಬ್ಬರು ಫೋನ್ನಲ್ಲಿ ಮಾತನಾಡುತ್ತಾ, ವಿಮಾನಕ್ಕೆ ಬೆಂಕಿಹೊತ್ತಿಕೊಂಡಿದೆ, ನಾವು ಲ್ಯಾಂಡ್ ಆಗುತ್ತಿದ್ದೇವೆ ಎಂದು ಹೇಳುತ್ತಿರುವುದು ಕೇಳಿಸಿತು. ವಿಮಾನ ನಿಂತ ಕೂಡಲೇ ಪ್ರಯಾಣಿಕರನ್ನು ಹೊರಕ್ಕೆ ಕಳುಹಿಸುವ ಕಾರ್ಯ ತ್ವರಿತವಾಗಿ ಆರಂಭಿಸಲಾಯಿತು. ನಾನಾಗ ಯಾರನ್ನೂ ಯಾವುದನ್ನೂ ಗಮನಿಸುವ ಸ್ಥಿತಿಯಲ್ಲಿರಲಿಲ್ಲ. ಪ್ರಯಾಣಿಕರನ್ನು ಕಾಲರ್ ಹಿಡಿದು ಎಳೆದೆಳೆದು ಹೊರ ಹಾಕುತ್ತಿದ್ದೆ ಅಷ್ಟೆ. ಅವರು ಅಲ್ಲಿ ಬಾಕಿ ಆಗಬಾರದು ಎಂಬುದಷ್ಟೇ ನನ್ನ ಉದ್ದೇಶವಾಗಿತ್ತು’ ಎಂದು ವಿವರಿಸಿದ್ದಾರೆ.
ಘಟನೆಯಲ್ಲಿ ಮತ್ತೊಬ್ಬ ಗಗನಸಖಿ ಮ್ಯಾಕ್ಸಿಮ್ ಮೊಯ್ಸೀವ್ ಸಹ ಮೃತಪಟ್ಟಿದ್ದಾರೆ. ಪ್ರಯಾಣಿಕರ ರಕ್ಷಣಾಕಾರ್ಯಾಚರಣೆಗೆ ಮತ್ತಷ್ಟು ವೇಗ ನೀಡಲು ವಿಮಾನದ ಹಿಂಬದಿಯ ತುರ್ತು ನಿರ್ಗಮನ ಬಾಗಿಲನ್ನು ತೆರೆಯಲು ಅವರು ಪ್ರಯತ್ನಿಸುತ್ತಿದ್ದರು. ಅಷ್ಟರಲ್ಲಿ ವಿಮಾನದ ಹಿಂಭಾಗವನ್ನು ಪೂರ್ತಿ ಆವರಿಸಿದ್ದ ಬೆಂಕಿ ಅವರನ್ನು ಬಲಿಪಡೆದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.