ನರೇಂದ್ರ ಮೋದಿ
(ಪಿಟಿಐ ಚಿತ್ರ)
ಕೊಲಂಬೊ: ಶ್ರೀಲಂಕಾದ ಐತಿಹಾಸಿಕ ನಗರ ಅನುರಾಧಪುರಕ್ಕೆ ಇಂದು (ಭಾನುವಾರ) ಭೇಟಿ ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದ ನೆರವಿನ ಎರಡು ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಶ್ರೀಲಂಕಾದ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಉಪಸ್ಥಿತರಿದ್ದರು.
ಕೊಲಂಬೊದಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ಆಧ್ಯಾತ್ಮಿಕ ನಗರ ಅನುರಾಧಪುರದಲ್ಲಿ ಜಯ ಶ್ರೀ ಮಹಾ ಬೋಧಿ ಬೌದ್ಧ ಮಂದಿರಕ್ಕೆ ಭೇಟಿ ನೀಡಿ ಪ್ರಧಾನಿ ಮೋದಿ ಪ್ರಾರ್ಥನೆ ಸಲ್ಲಿಸಿದರು.
ಭಾರತದ ನೆರವಿನೊಂದಿಗೆ ನವೀಕರಿಸಲಾದ 128 ಕಿ.ಮೀ ಉದ್ದದ ಮಾಹೋ-ಒಮಂಥೈ ರೈಲು ಮಾರ್ಗವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾಹೋದಿಂದ ಅನುರಾಧಪುರ ಸಿಗ್ನಲಿಂಗ್ ವ್ಯವಸ್ಥೆಗೂ ಪ್ರಧಾನಿ ಮೋದಿ ಚಾಲನೆ ನೀಡಿದರು.
ಭಾರತ-ಶ್ರೀಲಂಕಾ ಅಭಿವೃದ್ಧಿ ಪಾಲುದಾರಿಕೆಯ ಅಡಿಯಲ್ಲಿ ಜಾರಿಗೆ ತರಲಾದ ಈ ರೈಲ್ವೆ ಯೋಜನೆಗಳು ಶ್ರೀಲಂಕಾದಲ್ಲಿ ಉತ್ತರ-ದಕ್ಷಿಣ ರೈಲು ಸಂಪರ್ಕ ಜಾಲವನ್ನು ಬಲಪಡಿಸುವಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ತಿಳಿಸಿದೆ.
ಇದು ಶ್ರೀಲಂಕಾದಲ್ಲಿ ಪ್ರಯಾಣಿಕ ಹಾಗೂ ಸರಕು ಸಾಗಣೆಗೆ ಮತ್ತಷ್ಟು ಆವೇಗ ತುಂಬಲಿದೆ ಎಂದು ಹೇಳಿದೆ.
ಮೂರು ದಿನಗಳ ಲಂಕಾ ಪ್ರವಾಸದಲ್ಲಿ ಪ್ರಧಾನಿ ಮೋದಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಯಶಸ್ವಿ ಲಂಕಾ ಪ್ರವಾಸದ ಬಳಿಕ ತವರಿಗೆ ಹಿಂತಿರುಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.