ವಿಶ್ವ ಸಂಸ್ಥೆ : ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಗೆ ಸರದಿಯಂತೆ ಭಾರತವು ಡಿ.1ರಿಂದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ. ಡಿಸೆಂಬರ್ ಇಡೀ ತಿಂಗಳು ಭಾರತವು ಮಂಡಳಿಯ ಅಧ್ಯಕ್ಷ ಸ್ಥಾನದಲ್ಲಿರಲಿದೆ. ಈ ಅವಧಿಯಲ್ಲಿ ಭಯೋತ್ಪಾದನೆ ಎದುರಿಸುವ ಮತ್ತು ಬಹುತ್ವವನ್ನು ಪ್ರತಿಪಾದಿಸುವ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ವಿಶ್ವ ಸಂಸ್ಥೆಯ ಭಾರತದ ಕಾಯಂ ರಾಯಭಾರಿಯಾಗಿರುವ ರುಚಿರಾ ಕಂಬೊಜ್ ಅವರು ಈ ಅವಧಿಯಲ್ಲಿ ಅಧ್ಯಕ್ಷರಾಗಿರಲಿದ್ದಾರೆ. ಇದೇ ಮೊದಲ ಬಾರಿಗೆ ಭಾರತದ ಮಹಿಳೆಯೊಬ್ಬರಿಗೆ ಈ ಸ್ಥಾನಕ್ಕೇರುವ ಅವಕಾಶ ದೊರೆತಿದೆ.
ಅಧಿಕಾರ ವಹಿಸಿಕೊಳ್ಳುವ ಮುನ್ನಾ ದಿನವಾದ ಗುರುವಾರ ರುಚಿರಾ ಅವರು ವಿಶ್ವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಹಾಗೂ ಸಾಮಾನ್ಯ ಸಭೆಯ ಅಧ್ಯಕ್ಷ ಚಾಬ ಖುರೋಶಿ ಅವರನ್ನು ಭೇಟಿಯಾದರು. ಮುಂದಿನ ಒಂದು ತಿಂಗಳ ಯೋಜಿತ ಕಾರ್ಯಸೂಚಿಗಳ ಬಗ್ಗೆರುಚಿರಾ ಅವರು ಇಬ್ಬರೊಂದಿಗೂ ಚರ್ಚಿಸಿದರು.
ಬಹುತ್ವದ ಕುರಿತು ಡಿ.14ರಂದು ಹಾಗೂ ಭಯೋತ್ಪಾದನೆ ಎದುರಿಸುವ ಕುರಿತು ಡಿ. 15ರಂದು ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ನ್ಯೂಯಾರ್ಕ್ಗೆ ತೆರಳಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.