ADVERTISEMENT

ಉಕ್ರೇನ್‌ನಲ್ಲಿ ಹದಗೆಡುತ್ತಿರುವ ಮಾನವೀಯ ಪರಿಸ್ಥಿತಿ: ಭಾರತ ಕಳವಳ

ಪಿಟಿಐ
Published 18 ಮಾರ್ಚ್ 2022, 7:08 IST
Last Updated 18 ಮಾರ್ಚ್ 2022, 7:08 IST
ಸಾಂದರ್ಭಿಕ ಚಿತ್ರ – ಪಿಟಿಐ ಸಂಗ್ರಹ
ಸಾಂದರ್ಭಿಕ ಚಿತ್ರ – ಪಿಟಿಐ ಸಂಗ್ರಹ   

ವಿಶ್ವಸಂಸ್ಥೆ: ಯುದ್ಧಪೀಡಿತ ಉಕ್ರೇನ್‌ನಲ್ಲಿ ಮಾನವೀಯ ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ವಿಶ್ವಸಂಸ್ಥೆಯಲ್ಲಿ ಭಾರತ ಕಳವಳ ವ್ಯಕ್ತಪಡಿಸಿದೆ.

ಯುದ್ಧದಿಂದಾಗಿ ತೊಂದರೆಯಲ್ಲಿ ಸಿಲುಕಿಕೊಂಡಿರುವ ಜನರ ಅಗತ್ಯಗಳನ್ನು ಪೂರೈಸಲು ತುರ್ತು ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್‌.ತಿರುಮೂರ್ತಿ ಹೇಳಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಸ್ವತಂತ್ರ, ನಿಷ್ಪಕ್ಷಪಾತ, ತಟಸ್ಥ, ಮಾನವೀಯ ಮೌಲ್ಯಗಳೊಂದಿಗೆ ಕ್ರಮ ಕೈಗೊಳ್ಳಬೇಕಾದ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.

‘ಯುದ್ಧದ ಆರಂಭದಿಂದಲೂ ಹಂತಹಂತವಾಗಿ ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ಭಾರತಕ್ಕೆ ತೀವ್ರ ಕಳವಳವಿದೆ. ಸಂಘರ್ಷವು ನಾಗರಿಕರ ಸಾವಿಗೆ ಕಾರಣವಾಗಿರುವುದು ಮಾತ್ರವಲ್ಲದೆ, ಸಾವಿರಾರು ಮಂದಿಯ ಸ್ಥಳಾಂತರಕ್ಕೆ ಕಾರಣವಾಗಿದೆ. 30 ಲಕ್ಷಕ್ಕೂ ಹೆಚ್ಚು ನಿರಾಶ್ರಿತರು ನೆರೆಯ ದೇಶಗಳಿಗೆ ತೆರಳಿದ್ದಾರೆ. ಸಂಘರ್ಷಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ’ ಎಂದು ತಿರುಮೂರ್ತಿ ಹೇಳಿದ್ದಾರೆ.

ಭಾರತವು 22,500 ಮಂದಿಯನ್ನು ಉಕ್ರೇನ್‌ನಿಂದ ಸ್ವದೇಶಕ್ಕೆ ಕರೆಸಿಕೊಂಡಿದೆ. 18 ದೇಶಗಳ ಪ್ರಜೆಗಳಿಗೆ ಅವರ ದೇಶಗಳಿಗೆ ಮರಳಲು ನೆರವು ನೀಡಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.