ಶಶಿ ತರೂರ್
(ಪಿಟಿಐ ಚಿತ್ರ)
ವಾಷಿಂಗ್ಟನ್: 'ಭಾರತವು ಅಮೆರಿಕದ ಅಧ್ಯಕ್ಷಗಿರಿಯನ್ನು ಗೌರವಿಸುತ್ತದೆ. ಆದರೆ ಭಾರತ-ಪಾಕಿಸ್ತಾನ ವಿಷಯದಲ್ಲಿ ಯಾರೂ ಮಧ್ಯಸ್ಥಿಕೆ ವಹಿಸುವುದನ್ನು ಬಯಸುವುದಿಲ್ಲ' ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಇತ್ತೀಚೆಗಿನ ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಘರ್ಷದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದರು ಎಂಬುದರ ಕುರಿತಾಗಿ ಪ್ರತಿಕ್ರಿಯಿಸಿದ ತರೂರ್, 'ಕಾರ್ಯಾಚರಣೆ 'ನಿಲ್ಲಿಸಿ' ಅಂತ ಭಾರತಕ್ಕೆ ಯಾರೂ ಹೇಳಬೇಕಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.
'ಆಪರೇಷನ್ ಸಿಂಧೂರ' ಹಾಗೂ ಪಾಕಿಸ್ತಾನದ ಭಯೋತ್ಪಾದನೆ ಚಟುವಟಿಕೆಗಳ ಕುರಿತು ಜಾಗತಿಕ ರಾಷ್ಟ್ರಗಳಿಗೆ ವಿವರಿಸುವ ಸರ್ವಪಕ್ಷ ಸಂಸದೀಯ ನಿಯೋಗದ ನೇತೃತ್ವ ವಹಿಸಿರುವ ತರೂರ್, ಅಮೆರಿಕದ ಸರ್ಕಾರದ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.
'ನಾವು ಅಮೆರಿಕದ ಅಧ್ಯಕ್ಷಗಿರಿ ಹಾಗೂ ಅಮೆರಿಕದ ಅಧ್ಯಕ್ಷರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದೇವೆ. ಆದರೆ ಈ ವಿಷಯದಲ್ಲಿ ಯಾರಾದರೂ ಮಧ್ಯಸ್ಥಿಕೆ ವಹಿಸಬೇಕು ಎಂದು ಭಾರತ ಎಂದಿಗೂ ಬಯಸಿಲ್ಲ' ಎಂದು ಹೇಳಿದ್ದಾರೆ.
ರಾಷ್ಟ್ರೀಯ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿದ ತರೂರ್, 'ಪಾಕಿಸ್ತಾನ ಭಯೋತ್ಪಾದನೆಯ ಭಾಷೆಯನ್ನು ಬಳಸುವವರೆಗೂ ನಾವು ಸೇನೆಯ ಭಾಷೆ ಬಳಸುವುದರಲ್ಲಿ ಯಾವುದೇ ತಪ್ಪು ಇಲ್ಲ. ಹಾಗಾಗಿ ಮೂರನೇ ವ್ಯಕ್ತಿಯ ಅಗತ್ಯವಿಲ್ಲ' ಎಂದು ಹೇಳಿದ್ದಾರೆ.
'ನಮ್ಮೊಂದಿಗೆ ಸಹಜ ಬಾಂಧವ್ಯ ಪುನಃಸ್ಥಾಪಿಸಲು ಪಾಕಿಸ್ತಾನ ನಿಜವಾಗಿಯೂ ಬಯಸುವುದಾದರೆ ಆ ನಿಟ್ಟಿನಲ್ಲಿ ಗಂಭೀರವಾದ ಕ್ರಮ ಕೈಗೊಂಡಲ್ಲಿ ನಮಗೆ ಮಧ್ಯವರ್ತಿಗಳ ಸಹಾಯವಿಲ್ಲದೆ ಮಾತುಕತೆ ನಡೆಸಬಹುದಾಗಿದೆ' ಎಂದು ಹೇಳಿದ್ದಾರೆ.
'ಹಾಗಾಗಿ ಸಂಘರ್ಷದ ಸಮಯದಲ್ಲೂ ಯಾರೂ ನಮಗೆ 'ನಿಲ್ಲಿಸಿ' ಎಂದು ಹೇಳುವ ಅಗತ್ಯವಿಲ್ಲ. ಪಾಕಿಸ್ತಾನ ನಿಲ್ಲಿಸಿದಾಕ್ಷಣ ನಿಲ್ಲಿಸಲು ನಾವು ಸಿದ್ಧರಿದ್ದೆವು' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.