ಮ್ಯಾಡ್ರಿಡ್: ’ಭಾರತದ ಅನೇಕ ನಗರಗಳಲ್ಲಿ ವಿಷಪೂರಿತ ಗಾಳಿಯ ಮಟ್ಟವು ಶಿಫಾರಸು ಮಾಡಲಾದ ಮಾರ್ಗಸೂಚಿಗಳಿಗಿಂತ ಹೆಚ್ಚಾಗುತ್ತಿದೆ. ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದ್ದು, ವಾಯುಮಾಲಿನ್ಯ ನಿಯಂತ್ರಿಸಲು ಭಾರತ ತುರ್ತು ಕ್ರಮ ತೆಗೆದುಕೊಳ್ಳಬೇಕು‘ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲುಎಚ್ಒ) ನಿರ್ದೇಶಕಿ ಮಾರಿಯಾ ನೀರಾ ಹೇಳಿದ್ದಾರೆ.
ಡಬ್ಲುಎಚ್ಒ ವಿಜ್ಞಾನ ಮತ್ತು ಪರಿಸರ ಕೇಂದ್ರ ಹಾಗೂ ಇತರರು ನಡೆಸಿದ ಹಲವು ಅಧ್ಯಯನಗಳು ಮತ್ತು ಲ್ಯಾನ್ಸೆಟ್ನಂತಹ ನಿಯತಕಾಲಿಕೆಗಳಲ್ಲಿ ಪ್ರಕಟವಾದ ಲೇಖನಗಳನ್ನು ಪರಿಗಣಿಸಿದ್ದು, ಭಾರತದಲ್ಲಿ ಸಂಭವಿಸುವ ಅಕಾಲಿಕ ಸಾವುಗಳಿಗೆ ಮಾಲಿನ್ಯವೂ ಕಾರಣ ಎಂದು ಹೇಳಲಾಗಿದೆ.
’ಮಾಲಿನ್ಯ ಮತ್ತು ಜೀವಿತಾವಧಿ ಕಡಿಮೆಯಾಗುವುದರ ನಡುವೆ ಸಂಬಂಧವಿದೆ ಎಂಬ ಬಗ್ಗೆ ಭಾರತದಲ್ಲಿ ಯಾವುದೇ ಅಧ್ಯಯನ ನಡೆದಿಲ್ಲ. ಈ ಬಗ್ಗೆ ಭಾರತದಲ್ಲಿ ನಡೆಸಿದ ಅಧ್ಯಯನಗಳೂ ಹೇಳಿಲ್ಲ. ಜನರಲ್ಲಿ ಭಯದ ವಾತಾವರಣ ಸೃಷ್ಟಿಸಬಾರದು‘ ಎಂದು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಇತ್ತೀಚೆಗೆ ಸಂಸತ್ನಲ್ಲಿ ಹೇಳಿದ್ದರು.
ಸಚಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ನೀರಾ, ’ಜನರ ಆರೋಗ್ಯದ ಮೇಲೆ ವಾಯುಮಾಲಿನ್ಯ ಭಾರಿ ಪರಿಣಾಮ ಬೀರುತ್ತದೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳು ಇವೆ. ಭಾರತದಲ್ಲಿ ವಾಯುಮಾಲಿನ್ಯ ಹೆಚ್ಚಾಗಿದ್ದು, ಕೂಡಲೇ ತುರ್ತು ಕ್ರಮ ತೆಗೆದುಕೊಳ್ಳಬೇಕು‘ ಎಂದು ಅವರು ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.