ADVERTISEMENT

ತನ್ನದೇ ಜನರ ಮೇಲೆ ಬಾಂಬ್ ದಾಳಿ, ಅತ್ಯಾಚಾರ ಎಸಗಿದ್ದ ಪಾಕ್: UNSCಯಲ್ಲಿ ಭಾರತ

ಪಿಟಿಐ
Published 7 ಅಕ್ಟೋಬರ್ 2025, 5:59 IST
Last Updated 7 ಅಕ್ಟೋಬರ್ 2025, 5:59 IST
ವಿಶ್ವಸಂಸ್ಥೆ 
ವಿಶ್ವಸಂಸ್ಥೆ    

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನವನ್ನು ಭಾರತ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ತನ್ನದೇ ಜನರ ಮೇಲೆ ಬಾಂಬ್ ದಾಳಿ ನಡೆಸುವ ಮತ್ತು ವ್ಯವಸ್ಥಿತ ನರಮೇಧ ನಡೆಸುವ ದೇಶ ಎಂದು ಹೇಳಿದೆ.

‘ಮಹಿಳೆಯರು, ಶಾಂತಿ ಮತ್ತು ಭದ್ರತೆ’ ಕುರಿತು ಯುಎನ್‌ಎಸ್‌ಸಿಯಲ್ಲಿ ನಡೆದ ಮುಕ್ತ ಚರ್ಚೆ ವೇಳೆ ನೀಡಿದ ಹೇಳಿಕೆಯಲ್ಲಿ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರಾಯಭಾರಿ ಪರ್ವತನೇನಿ ಹರೀಶ್, ಪಾಕಿಸ್ತಾನವು 1971ರಲ್ಲಿ ಆಪರೇಷನ್ ಸರ್ಚ್‌ಲೈಟ್ ಅನ್ನು ನಡೆಸಿತು. ತನ್ನದೇ ಸೈನ್ಯದಿಂದ 4 ಲಕ್ಷ ಮಹಿಳಾ ನಾಗರಿಕರ ಮೇಲೆ ವ್ಯವಸ್ಥಿತವಾಗಿ ಸಾಮೂಹಿಕ ಅತ್ಯಾಚಾರ ನಡೆಸಲು ಅನುಮೋದಿಸಿತು ಎಂದು ಹೇಳಿದರು.

ದುರಾದೃಷ್ಟವಶಾತ್, ಪ್ರತಿ ವರ್ಷ ನನ್ನ ದೇಶದ ವಿರುದ್ಧ, ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಪಾಕ್‌ನಿಂದ ಹುರುಳಿಲ್ಲದ ಟೀಕೆಗಳನ್ನು ಕೇಳುತ್ತಿದ್ದೇವೆ ಎಂದೂ ಹೇಳಿದರು.

ADVERTISEMENT

‘ತನ್ನದೇ ಜನರ ಮೇಲೆ ಬಾಂಬ್ ದಾಳಿ ಮಾಡುವ, ವ್ಯವಸ್ಥಿತ ನರಮೇಧವನ್ನು ನಡೆಸುವ ದೇಶವು ತಪ್ಪು ನಿರ್ದೇಶನ ಮತ್ತು ಅತಿಶಯೋಕ್ತಿಯಿಂದ ಜಗತ್ತನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸಬಹುದು’ ಎಂದು ಹರೀಶ್ ಹೇಳಿದರು. ಪಾಕಿಸ್ತಾನದ ಅಪಪ್ರಚಾರವನ್ನು ಜಗತ್ತು ನೋಡಿದೆ ಎಂದು ಹೇಳಿದರು.

1971ರ ಮಾರ್ಚ್ 25ರಂದು ಆಪರೇಷನ್ ಸರ್ಚ್‌ಲೈಟ್ ಹೆಸರಲ್ಲಿ ಪೂರ್ವ ಪಾಕಿಸ್ತಾನದಲ್ಲಿ ನಾಗರಿಕರ ಸಾಮೂಹಿಕ ಹತ್ಯೆ ನಡೆಸಿತ್ತು.

ಮಹಿಳೆಯರು, ಶಾಂತಿ ಮತ್ತು ಭದ್ರತೆ ಕಾರ್ಯಸೂಚಿಯಲ್ಲಿ ಭಾರತದ ದಾಖಲೆ ಕಳಂಕರಹಿತವಾದದ್ದಾಗಿದೆ ಎಂದು ಹರೀಶ್, ರಷ್ಯಾ ಅಧ್ಯಕ್ಷತೆಯಲ್ಲಿ ನಡೆದ ಭದ್ರತಾ ಮಂಡಳಿ ಸಭೆಯಲ್ಲಿ ಹೇಳಿದರು.

ಪಾಕಿಸ್ತಾನವು ತನ್ನ ಹೇಳಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಷಯ ಎತ್ತಿದ ನಂತರ ಭಾರತದ ಬಲವಾದ ಪ್ರತಿಕ್ರಿಯೆ ಬಂದಿತು.

‘ಭಾರತವು ದೇಶದ ಮಹಿಳೆಯರ ಗುಂಪಿನಿಂದ ಕಾಶ್ಮೀರಿ ಮಹಿಳೆಯರನ್ನು ಹೊರಗಿಟ್ಟು, ಶಾಂತಿ ಮತ್ತು ಭದ್ರತಾ ಕಾರ್ಯಸೂಚಿಯನ್ನು ತನ್ನ ನ್ಯಾಯವ್ಯವಸ್ಥೆಯಿಂದ ಅಳಿಸಿಹಾಕಿದೆ’ ಎಂದು ಪಾಕಿಸ್ತಾನಿ ಪ್ರತಿನಿಧಿ ಹೇಳಿಕೆ ನಂತರ ಭಾರತ ಪ್ರತ್ಯುತ್ತರ ನೀಡಿದೆ.

ಮಹಿಳೆಯರು, ಶಾಂತಿ ಮತ್ತು ಭದ್ರತೆ ಕಾರ್ಯಸೂಚಿಗೆ ಭಾರತದ ಬದ್ಧತೆ ಅಚಲವಾಗಿದೆ ಎಂದು ಹರೀಶ್ ಅವರು ಪ್ರತಿಕ್ರಿಯಿಸಿದ್ದಾರೆ.

ಜಾಗತಿಕ ಶಾಂತಿಗೆ ಅದರ ಬದ್ಧತೆಯ ಅಭಿವ್ಯಕ್ತಿಯಾಗಿ ವಿಶ್ವಸಂಸ್ಥೆಯ ಶಾಂತಿಪಾಲನೆಗೆ ಭಾರತದ ಸ್ಥಿರ ಕೊಡುಗೆಯನ್ನು ಅವರು ಎತ್ತಿ ತೋರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.