ವಾಷಿಂಗ್ಟನ್: ‘ಕೋವಿಡ್ ಸಾಂಕ್ರಾಮಿಕ ನಂತರದ ಆರ್ಥಿಕತೆಯ ತ್ವರಿತ ಚೇತರಿಕೆಗೆ ಚುರುಕು ನೀಡುವುದು ಮಾತ್ರವಲ್ಲದೆ, ಭವಿಷ್ಯದ ಆಘಾತಗಳನ್ನು ತಡೆಯಲುಎಲ್ಲ ದೇಶಗಳಾದ್ಯಂತ ಸಂಘಟಿತ ಕ್ರಮದ ತುರ್ತು ಅಗತ್ಯವಿದೆ’ ಎಂದು ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟರು.
ಇಲ್ಲಿ ಬುಧವಾರ ನಡೆದ ‘ಜಿ20ಉದಯೋನ್ಮುಖ ಮಾರುಕಟ್ಟೆ ಆರ್ಥಿಕತೆಗಳ (ಇಎಂಇ) ಸಭೆ’ಯಲ್ಲಿ ಅವರು ಮಾತನಾಡಿದರು.ಈ ಸಭೆಯನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್), ಮುಂಬರುವ ಜಿ20 ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ಗಳ ಸಭೆಗೆ ಪೂರ್ವಭಾವಿಯಾಗಿ ಆಯೋಜಿಸಿತ್ತು.
ಆಹಾರ ಮತ್ತು ಇಂಧನ ಭದ್ರತೆ, ಜಾಗತಿಕ ಆರ್ಥಿಕ ಪರಿಸ್ಥಿತಿಗಳ ಸಂದಿಗ್ಧತೆಯಲ್ಲಿ ಇಎಂಇ ಮುಂದಿರುವ ಸವಾಲುಗಳ ಅಪಾಯ ಮತ್ತು ಅಲ್ಪಾವಧಿ ನೀತಿಗಳ ಬಗ್ಗೆ ತಮ್ಮ ಆರ್ಥಿಕ ದೃಷ್ಟಿಕೋನದ ಒಳನೋಟಗಳನ್ನುನಿರ್ಮಲಾ ಅವರು ಹಂಚಿಕೊಂಡಿದ್ದಾರೆ.ಭವಿಷ್ಯದ ಕಾರ್ಯಗಳು ಮತ್ತು ಸಾಲದ ದೋಷಗಳ ಬಗ್ಗೆಯೂ ಚರ್ಚಿಸಿದರು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಪರಿಸರಕ್ಕೆ ಹಾನಿಮಾಡದ, ಸುಸ್ಥಿರ ಮತ್ತು ಆರ್ಥಿಕವಾಗಿಯೂ ಕಾರ್ಯಸಾಧ್ಯವಾದ ಪರ್ಯಾಯಗಳಇಂಧನ ಮೂಲಗಳ ಅಗತ್ಯತೆಯ ಕುರಿತು ಮಾತನಾಡಿದ ಸಚಿವರು, ‘ಈ ದಿಕ್ಕಿನಲ್ಲಿ ಪ್ರಯತ್ನಗಳನ್ನುಚುರುಕುಗೊಳಿಸಲು ‘ಸೌರಮೈತ್ರಿ’ ಪರಿಣಾಮಕಾರಿಯಾದ ವೇದಿಕೆಯಾಗಬಹುದು’ ಎಂದು ಅಭಿಪ್ರಾಯಪಟ್ಟಿರುವುದಾಗಿ ಹಣಕಾಸು ಸಚಿವಾಲಯ ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದೆ.
ಐಎಂಎಫ್ ಮತ್ತು ವಿಶ್ವಬ್ಯಾಂಕ್ನ ವಾರ್ಷಿಕ ಸಭೆಗಳಲ್ಲಿ ಭಾಗವಹಿಸುವ ಸಲುವಾಗಿ ಸೀತಾರಾಮನ್ ಅವರು ಸೋಮವಾರವೇ ವಾಷಿಂಗ್ಟನ್ಗೆ ಆಗಮಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.