ಲಂಡನ್/ಹ್ಯೂಸ್ಟನ್: ಅಮೆರಿಕ, ಬ್ರಿಟನ್ನಲ್ಲಿ ‘ಸೇವಾ ಪರ್ವ 2025’ ಭಾಗವಾಗಿ ‘ವಿಕಸಿತ ಭಾರತ ಓಟ’ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಬ್ರಿಟನ್ನಲ್ಲಿರುವ ಭಾರತದ ಹೈಕಮಿಷನರ್ ಹಾಗೂ ಕಾನ್ಸುಲೇಟ್ ವತಿಯಿಂದ ಸೋಮವಾರ ವಿಕಸಿತ ಭಾರತ ಓಟ ನಡೆಯಿತು. ‘ಸೇವೆ, ಸೃಜನಶೀಲತೆ ಹಾಗೂ ಸಾಂಸ್ಕೃತಿಕ ಹೆಮ್ಮೆ’ ಎಂಬುದು ಕಾರ್ಯಕ್ರಮದ ಧ್ಯೇಯವಾಕ್ಯವಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿಸಿರುವ ‘ತಾಯಿ ಹೆಸರಿನಲ್ಲಿ ಒಂದು ಗಿಡ ನೆಡಿ’ ಕಾರ್ಯಕ್ರಮದಡಿ ಕೇಂದ್ರ ಲಂಡನ್ನ ರಾಜತಾಂತ್ರಿಕ ಅಧಿಕಾರಿ ನಿವಾಸದ ಆವರಣದಲ್ಲಿ ಚೆರ್ರಿ ಗಿಡವನ್ನು ನೆಡಲಾಯಿತು.
‘ಓಟದ ಆರಂಭದಿಂದ ಕೊನೆಯವರೆಗೂ ಜನರು ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ತಮ್ಮ ಬದ್ಧತೆ, ಏಕತೆಯನ್ನು ಪ್ರದರ್ಶಿಸಿದರು’ ಎಂದು ಭಾರತೀಯ ಹೈಕಮಿಷನ್ ಹೇಳಿದೆ.
‘ವಿಕಸಿತ ಭಾರತ ಹಾಗೂ ಆತ್ಮನಿರ್ಭರ ಭಾರತ ಕುರಿತು ಹೈಕಮಿಷನರ್ ವಿಕ್ರಂ ದೊರೆಸ್ವಾಮಿ ಪ್ರತಿಜ್ಞಾ ವಿಧಿ ಬೋಧಿಸಿದರು. ‘ನಮ್ಮ ಶ್ರೀಮಂತ ಪರಂಪರೆ, ಸಂಪ್ರದಾಯವನ್ನು ಮುನ್ನಡೆಸಬೇಕು. ನಾವು ಎಲ್ಲೇ ಇದ್ದರೂ ಜಗತ್ತಿನ ಒಳಿತಿಗೆ ಕೊಡುಗೆ ನೀಡಬೇಕು’ ಎಂದು ಹೇಳಿದರು.
900 ಮಂದಿ ಭಾಗಿ
ಅಮೆರಿಕದ ಟೆಕ್ಸಾಸ್ ರಾಜ್ಯದ ಹ್ಯೂಸ್ಟನ್ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ವತಿಯಿಂದ ಜಾರ್ಜ್ ಬುಷ್ ಉದ್ಯಾನದಲ್ಲಿ ಭಾನುವಾರ ಆಯೋಜಿಸಿದ್ದ ವಿಕಸಿತ ಭಾರತ ಓಟದಲ್ಲಿ 900 ಮಂದಿ ಪಾಲ್ಗೊಂಡಿದ್ದರು. ಭಾರತೀಯ ಅಮೆರಿಕನ್ನರನ್ನು ಒಳಗೊಂಡ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಕುಟುಂಬಗಳ ಸದಸ್ಯರು ಯುವಕರು ಹಿರಿಯ ನಾಗರಿಕರು ಭಾಗವಹಿಸಿದ್ದರು. 3ರಿಂದ 5 ಕಿ.ಮೀ. ಓಟ ಹಾಗೂ ನಡಿಗೆ ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜಗಳನ್ನು ಬೀಸುತ್ತಾ ಹಾಗೂ ಭಾರತದ ಅಭಿವೃದ್ಧಿಯ ಗುರಿಗಳ ಕುರಿತ ಘೋಷವಾಕ್ಯಗಳನ್ನು ಹೊಂದಿದ್ದ ಬ್ಯಾನರ್ಗಳನ್ನು ಹಿಡಿದು ಸಾಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.