ದುಬೈ: ಹೊಸ ಸ್ವರೂಪದ ಕೊರೊನಾ ವೈರಾಣು ವ್ಯಾಪಿಸುವುದನ್ನು ತಡೆಯಲು ಸೌದಿ ಅರೇಬಿಯಾ ಹಾಗೂ ಕುವೈತ್ ತಮ್ಮ ಗಡಿಗಳನ್ನು ಮುಚ್ಚಿದ್ದು, ಯುಎಇಯಲ್ಲಿ ಸಿಲುಕಿಕೊಂಡಿರುವ ಭಾರತೀಯರು ಸೇರಿದಂತೆ 300ಕ್ಕೂ ಅಧಿಕ ಜನರಿಗೆ ಉಚಿತ ವಸತಿ ಸೌಲಭ್ಯವನ್ನು ನೀಡಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ತಾವು ವಾಸಿಸುತ್ತಿರುವ ರಾಷ್ಟ್ರದಿಂದ ನೇರ ವಿಮಾನ ಸೌಲಭ್ಯ ಇಲ್ಲದೇ ಇದ್ದ ಕಾರಣ, ಯುಎಇಗೆ ಆಗಮಿಸಿ ಅಲ್ಲಿಂದ ತಮ್ಮ ದೇಶಕ್ಕೆ ಹೋಗಲು ಇವರು ಆಗಮಿಸಿದ್ದರು ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. ಯುಎಇಯಲ್ಲಿ 14 ದಿನಗಳ ಕಡ್ಡಾಯ ಕ್ವಾರಂಟೈನ್ನಲ್ಲಿ ಇದ್ದ ಇವರು ತಮ್ಮ ಊರುಗಳಿಗೆ ತೆರಳಲು ಸಜ್ಜಾಗಿದ್ದ ಸಂದರ್ಭದಲ್ಲಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಬ್ರಿಟನ್ನಲ್ಲಿ ಹೊಸ ಸ್ವರೂಪದ ಕೊರೊನಾ ವೈರಾಣು ವೇಗವಾಗಿ ಹರಡುತ್ತಿರುವ ಕಾರಣದಿಂದ ಸೌದಿ ಅರೇಬಿಯಾ ಹಾಗೂ ಕುವೈತ್, ಎಲ್ಲ ಗಡಿಗಳನ್ನು ಮುಚ್ಚಿದ್ದು, ವಿಮಾನ ಹಾರಾಟವನ್ನೂ ಸ್ಥಗಿತಗೊಳಿಸಿದೆ.
ನಿರ್ಮಾಣ ಕಂಪನಿ ಆಸಾ ಗ್ರೂಪ್ ಜೊತೆಗೂಡಿ ಭಾರತೀಯ ಸಾಂಸ್ಕೃತಿಕ ಪ್ರತಿಷ್ಠಾನವು(ಐಸಿಎಫ್) ಉಚಿತ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಿದೆ. ಸಿಲುಕಿಕೊಂಡವರಲ್ಲಿ ಬಹುತೇಕರು ಕೇರಳ ಮೂಲದವರಾಗಿದ್ದಾರೆ ಎಂದು ಐಸಿಎಫ್ ಸಾರ್ವಜನಿಕ ಸಂಪರ್ಕಾಧಿಕಾರಿ ಅಬ್ದುಲ್ ಸಲಾಮ್ ಸಕಾಫಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.