
ಕ್ಷಿಪಣಿ ದಾಳಿ: ಸಾಂದರ್ಭಿಕ ಚಿತ್ರ
ದುಬೈ (ಪ್ರಜಾವಾಣಿ ವಾರ್ತೆ): ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯಲ್ಲಿ ಭಾರತದ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದ್ದು, ಅದರಲ್ಲಿ 15 ಮಂದಿ ಭಾರತೀಯರಿದ್ದರು ಎಂದು ತಿಳಿದುಬಂದಿದೆ. ದಾಳಿಯಿಂದ ಕನಿಷ್ಠ 4 ಮಂದಿ ಗಾಯಗೊಂಡಿದ್ದು, ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಕಲ್ಪಿಸಲಾಗಿದೆ.
ಹೊರ್ಮುಜ್ ಜಲಸಂಧಿಯತ್ತ ಸಮೀಪದಲ್ಲಿದ್ದ ಒಮಾನ್ ಕಡಲಿನಲ್ಲಿ ಈ ದಾಳಿ ನಡೆದಿದೆ.
‘ಹೊರ್ಮುಜ್ ಜಲಸಂಧಿಯ ಮೂಲಕ ಯಾವುದೇ ಸರಕು ಸಾಗಣೆಗೆ ಅವಕಾಶ ನೀಡುವುದಿಲ್ಲ’ ಎಂದು ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸಂಘರ್ಷದ ಬಳಿಕ ಇರಾನ್ನ ರೆವಲ್ಯೂಷನರಿ ಗಾರ್ಡ್ ಹೇಳಿಕೆ ನೀಡಿದೆ. ಆ ಮೂಲಕ ಗಲ್ಫ್ನಲ್ಲಿ ತೈಲ ಉತ್ಪಾದಿಸುತ್ತಿರುವ ಅಮೆರಿಕ ಹಾಗೂ ಮಿತ್ರಪಡೆಗಳ ತೈಲ ವಿತರಣೆಯನ್ನು ಸ್ಥಗಿತಗೊಳಿಸಲು ಇರಾನ್ ಸಿದ್ಧತೆ ನಡೆಸಿದೆ.
ಹೊರ್ಮುಜ್ ಜಲಸಂಧಿಯು ಇರಾನ್ ಹಾಗೂ ಒಮಾನ್ ನಡುವಿನ ಕಿರಿದಾದ ಮಾರ್ಗವಾಗಿದ್ಗು, ಜಾಗತಿಕ ವಹಿವಾಟಿನ ಐದನೇ ಒಂದು ಭಾಗವನ್ನು ಹೊಂದಿದೆ. ತೈಲ ಹಾಗೂ ಅನಿಲ ಟ್ಯಾಂಕರ್ನ ಶೇಕಡಾ 20ರಷ್ಟು ಇದೇ ಮಾರ್ಗದ ಮೂಲಕ ವಿವಿಧ ದೇಶಗಳಿಗೆ ತಲುಪುತ್ತವೆ.
ಕಿರಿದಾದ ಸ್ಥಳದಲ್ಲಿ 33 ಕಿ.ಮೀ ಅಗಲವಿರುವ ಈ ಮಾರ್ಗವು ಒಪೆಕ್ ರಾಷ್ಟ್ರಗಳಾದ (ಪೆಟ್ರೋಲ್ ರಫ್ತು ಮಾಡುವ ಸದಸ್ಯ ರಾಷ್ಟ್ರಗಳು) ಕುವೈತ್, ಬಹರೇನ್, ಕತಾರ್, ಸಂಯುಕ್ತ ಅರಬ್ ಒಕ್ಕೂಟ (ಯುಎಇ), ಇರಾಕ್ ದೇಶಕ್ಕೂ ಅರೇಬಿಯನ್ ಸಮುದ್ರದೊಂದಿಗೆ ಸಂಪರ್ಕ ಕಲ್ಪಿಸುವ ಏಕೈಕ ಸಮುದ್ರ ಮಾರ್ಗವಾಗಿದೆ. ಕೆಂಪು ಸಮುದ್ರ ಹಾಗೂ ಸೂಯೆಜ್ ಕಾಲುವೆಯ ಮೂಲಕ ಉತ್ತರ ಅಮೆರಿಕ ಹಾಗೂ ಪಶ್ಚಿಮ ಯುರೋಪ್ ರಾಷ್ಟ್ರಗಳಿಗೆ ಈ ಮಾರ್ಗವೂ ಸಂಪರ್ಕ ಕಲ್ಪಿಸುತ್ತದೆ.
ಈ ಜಲಸಂಧಿಯು ಒಮಾನ್ ಹಾಗೂ ಇರಾನ್ ನಡುವೆ ಇದೆ. ಅತ್ಯಂತ ಕಿರಿದಾದ ಮಾರ್ಗದಲ್ಲಿ 33 ಕಿ.ಮೀ ಅಗಲ ಹೊಂದಿದ್ದು, ಹಡಗು ಮಾರ್ಗಗಳು ಎರಡು ಭಾಗದಲ್ಲಿ 3 ಕಿ.ಮೀನಷ್ಟೇ ಅಗಲ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.