ಮೊಹಮ್ಮದ್ ಹುಸೇನ್
Credit: X/@IndiaWarZone
ನವದೆಹಲಿ: ರಷ್ಯಾದ ಸೇನೆಗೆ ಸೇರ್ಪಡೆಯಾಗಿದ್ದ ಭಾರತೀಯ ವಿದ್ಯಾರ್ಥಿಯೊಬ್ಬರು ಮಂಗಳವಾರ ಉಕ್ರೇನ್ ಪಡೆಗಳಿಗೆ ಶರಣಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಗುಜರಾತ್ ಮೂಲದ ಮಜೋತಿ ಸಾಹಿಲ್ ಮೊಹಮ್ಮದ್ ಹುಸೇನ್ ಎಂಬುವರನ್ನು ಉಕ್ರೇನ್ ಪಡೆಗಳು ಸೆರೆಹಿಡಿದಿವೆ ಎಂದು ಕೈವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಖಚಿತಪಡಿಸಿದೆ.
22 ವರ್ಷದ ಹುಸೇನ್ ಕೇವಲ ಮೂರು ದಿನಗಳನ್ನು ಮಾತ್ರ ಮುಂಚೂಣಿಯಲ್ಲಿ ಕಳೆದರು. ತಾನು ರಷ್ಯಾಕ್ಕೆ ಅಧ್ಯಯನ ಮಾಡಲು ಬಂದಿದ್ದೇನೆ ಎಂದು ಹೇಳಿಕೊಂಡನು ಆದರೆ ಮಾದಕವಸ್ತುಗಳೊಂದಿಗೆ ಸಿಕ್ಕಿಬಿದ್ದಿದ್ದಕ್ಕೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಅದರ ನಂತರ, ಅವನಿಗೆ ರಷ್ಯಾದ ಸಶಸ್ತ್ರ ಪಡೆಗಳೊಂದಿಗೆ ಒಪ್ಪಂದವನ್ನು ನೀಡಲಾಯಿತು.
‘ನಾನು ವ್ಯಾಸಂಗ ಮಾಡುವುದಕ್ಕಾಗಿ ರಷ್ಯಾಕ್ಕೆ ಬಂದಿದ್ದೆ. ಆದರೆ, ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾದ ಎಂಬ ಆರೋಪದ ಮೇಲೆ ನನಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಬಳಿಕ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೋರಾಡಲು ರಷ್ಯಾ ಸೇನೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಯಿತು’ ಎಂದು ಹುಸೇನ್ ಹೇಳಿಕೊಂಡಿದ್ದಾನೆ.
‘ನಾನು ಜೈಲಿನಲ್ಲಿ ಉಳಿಯಲು ಬಯಸಲಿಲ್ಲ, ಆದ್ದರಿಂದ ವಿಶೇಷ ಮಿಲಿಟರಿ ಕಾರ್ಯಾಚರಣೆಗಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದೆ. 16 ದಿನಗಳ ತರಬೇತಿ ಪಡೆದ ನಂತರ ಅಕ್ಟೋಬರ್ 1ರಂದು ನನ್ನನ್ನು ಯುದ್ಧ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು’ ಎಂದು ಹುಸೇನ್ ವಿವರಿಸಿದ್ದಾನೆ.
ರಷ್ಯಾದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ 27 ಭಾರತೀಯ ಪ್ರಜೆಗಳನ್ನು ಬಿಡುಗಡೆ ಮಾಡಿ ಸ್ವದೇಶಕ್ಕೆ ಕಳುಹಿಸುವಂತೆ ಭಾರತ ಒತ್ತಾಯಿಸಿದೆ ಎಂದು ವಿದೇಶಾಂಗ ಸಚಿವಾಲಯವು ಈ ಹಿಂದೆ ತಿಳಿಸಿತ್ತು.
ವಿದ್ಯಾರ್ಥಿ ಮತ್ತು ವ್ಯಾಪಾರ ವೀಸಾದಡಿ ರಷ್ಯಾಕ್ಕೆ ಬಂದಿರುವ ಭಾರತೀಯರನ್ನು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೋರಾಟ ನಡೆಸಲು ಸೇನೆಗೆ ಸೇರುವಂತೆ ಒತ್ತಾಯಿಸಲಾಗುತ್ತಿದೆ. ಸದ್ಯ ರಷ್ಯಾದ ಸೇನೆಗೆ ನೇಮಕಗೊಂಡ ಭಾರತೀಯರ ಸಂಖ್ಯೆ 150ಕ್ಕಿಂತ ಹೆಚ್ಚಾಗಿದೆ ಎಂದು ವರದಿಯಾಗಿದೆ.
ಕಳೆದ ವರ್ಷ ರಷ್ಯಾ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವ್ಯಾಡಿಮಿರ್ ಪುಟಿನ್ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು.
ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಕನಿಷ್ಠ 12 ಭಾರತೀಯರು ಮೃತಪಟ್ಟಿದ್ದರೆ, ರಷ್ಯಾದ ಅಧಿಕಾರಿಗಳು 96 ಭಾರತೀಯರನ್ನು ಬಿಡುಗಡೆ ಮಾಡಿದ್ದಾರೆ. ಇನ್ನೂ 16 ಜನರನ್ನು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.