ADVERTISEMENT

ಭಾರತದಲ್ಲಿ ಕೋವಿಡ್ ಸೋಂಕು ಇಳಿಮುಖ, ಅಂಕಿಅಂಶ ವಿಶ್ವಾಸಾರ್ಹವಲ್ಲ: ಡಬ್ಲ್ಯುಎಚ್‌ಒ

ರಾಯಿಟರ್ಸ್
Published 17 ಮೇ 2021, 9:35 IST
Last Updated 17 ಮೇ 2021, 9:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತದಲ್ಲಿ ಸೋಮವಾರದಂದುಕೋವಿಡ್-19 ಸೋಂಕು ಪ್ರಕರಣಗಳಲ್ಲಿ ಮತ್ತಷ್ಟು ಇಳಿಕೆ ವರದಿಯಾಗಿದೆ. ಆದರೂ ದೈನಂದಿನ ಸಾವಿನ ಪ್ರಕರಣಗಳು ಈಗಲೂ 4,000ಕ್ಕಿಂತಲೂ ಹೆಚ್ಚು ದಾಖಲಾಗಿದೆ. ಕೊರೊನಾವೈರಸ್ ಗ್ರಾಮೀಣ ಪ್ರದೇಶದಲ್ಲಿ ವೇಗವಾಗಿ ಹರಡುತ್ತಿರುವುದರಿಂದ ಈ ಅಂಕಿಅಂಶಗಳುವಿಶ್ವಾಸಾರ್ಹವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾವೈರಸ್ ಎರಡನೇ ಅಲೆ ತೀವ್ರವಾಗಿ ವ್ಯಾಪಿಸಿದ ಪರಿಣಾಮ ದೇಶದಲ್ಲಿ ಕಳೆದೊಂದು ತಿಂಗಳಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ ನಾಲ್ಕು ಲಕ್ಷಕ್ಕೂ ಹೆಚ್ಚು ವರದಿಯಾಗಿತ್ತು. ಹಾಗಿದ್ದರೂ ಕಳೆದ ಕೆಲವು ದಿನಗಳಲ್ಲಿ ಸೋಂಕು ಸಂಖ್ಯೆಯಲ್ಲಿ ಇಳಿಮುಖವಾದರೂ ದೇಶದಲ್ಲಿ ಸೋಂಕು ತನ್ನ ಶಿಖರವನ್ನು ತಲುಪಿದೆ ಎಂಬುದನ್ನು ಒಪ್ಪಿಕೊಳ್ಳಲು ತಜ್ಞರು ತಯಾರಾಗಲಿಲ್ಲ.

ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾಗಿರುವ ಬಿ.1.617 ದೇಶ ಹಾಗೂ ವಿದೇಶದಲ್ಲೂ ಕಳವಳಕ್ಕೆ ಕಾರಣವಾಗಿದೆ. ದೇಶದಲ್ಲಿ ಸೋಂಕು ಗರಿಷ್ಠ ಮಟ್ಟವನ್ನು ತಲುಪದ ಇನ್ನೂ ಅನೇಕ ಪ್ರದೇಶಗಳಿವೆ. ಅಲ್ಲಿ ಈಗಲೂ ಸಂಖ್ಯೆಯಲ್ಲಿ ವರ್ಧನೆಯಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ತಿಳಿಸಿದ್ದಾರೆ.

ADVERTISEMENT

ರಾಷ್ಟ್ರೀಯ ಪಾಸಿಟಿವ್ ದರ (ಶೇಕಡಾ 20ರಷ್ಟು) ಗರಿಷ್ಠ ಮಟ್ಟದಲ್ಲಿದ್ದು, ಇದಕ್ಕಿಂತಲೂ ಕೆಟ್ಟ ಸಮಯ ಎದುರಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹೆಚ್ಚಿನ ರಾಜ್ಯಗಳಲ್ಲಿ ಟೆಸ್ಟ್ ಅಸಮರ್ಪಕವಾಗಿದೆ. ಪಾಸಿಟಿವ್ ದರ ಏರುತ್ತಿರುವುದನ್ನು ನೋಡಿದಾಗ ನಾವು ಬೇಕಾದಷ್ಟು ಪರೀಕ್ಷೆ ನಡೆಸಿಲ್ಲ ಎಂಬುದಕ್ಕೆ ಪುರಾವೆಯಾಗಿದೆ ಎಂದಿದ್ದಾರೆ.

ಕೇಂದ್ರ ಆರೋಗ್ಯ ಇಲಾಖೆ ಸೋಮವಾರ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಕಳೆದ 24 ತಾಸಿನಲ್ಲಿ ದೇಶದಲ್ಲಿ 2,81,386 ಸೋಂಕು ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಎಪ್ರಿಲ್ 21ರ ಬಳಿಕ ಇದೇ ಮೊದಲ ಬಾರಿಗೆ ದೈನಂದಿನ ಸೋಂಕು ಪ್ರಕರಣಗಳ ಸಂಖ್ಯೆ ಮೂರು ಲಕ್ಷಗಿಂತಲೂ ಕಡಿಮೆ ದಾಖಲಾಗಿದೆ.

ಭಾರತದಲ್ಲಿ ಕೋವಿಡ್ ಸೋಂಕು ಪ್ರಕರಣಗಳಲ್ಲಿ ಇಳಿಕೆಯು ಕೇವಲ ಭ್ರಮೆ ಎಂದು ಅಮೆರಿಕದ ಪ್ರಾಧ್ಯಾಪಕ ಎಸ್. ವಿನ್ಸೆಂಟ್ ಅಭಿಪ್ರಾಯಪಟ್ಟಿದ್ದಾರೆ. ಮೊದಲನೆಯದಾಗಿ, ಸೀಮಿತ ಸಂಖ್ಯೆಯ ಪರೀಕ್ಷೆಯಿಂದಾಗಿ ಒಟ್ಟು ಪ್ರಕರಣಗಳ ಸಂಖ್ಯೆ ಕಡಿಮೆ ಎಂದು ಅಂದಾಜಿಸಲಾಗಿದೆ. ಎರಡನೇಯದವಾಗಿ ಗ್ರಾಮೀಣ ಪ್ರದೇಶದಲ್ಲಿ ಪ್ರಕರಣಗಳ ಸಂಖ್ಯೆ ನಿಖರವಾಗಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.