ಕೈರೊ/ಜೆರುಸಲೇಂ: ದಕ್ಷಿಣ ಗಾಜಾ ಪಟ್ಟಿಯ ಪರಿಹಾರ ವಿತರಣಾ ಕೇಂದ್ರವೊಂದರ ಮೇಲೆ ಮಂಗಳವಾರ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಕನಿಷ್ಠ 27 ಮಂದಿ ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಸತತ ಮೂರು ದಿನಗಳಿಂದ ದಾಳಿ ನಡೆಯುತ್ತಿರುವುದರಿಂದ ಆಹಾರ ವಿತರಣೆ ಸೇರಿದಂತೆ ಪರಿಹಾರ ಕಾರ್ಯಗಳಿಗೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಫಾದಲ್ಲಿರುವ ಪರಿಹಾರ ವಿತರಣೆ ಕೇಂದ್ರಕ್ಕೆ ನಿಯೋಜಿತ ಪ್ರವೇಶ ಮಾರ್ಗದ ನಿಯಮ ಉಲ್ಲಂಘಿಸಿ ಗುಂಪೊಂದು ಪ್ರವೇಶಿಸಲು ಮುಂದಾದಾಗ ಗುಂಡಿನ ದಾಳಿ ನಡೆಸಲಾಯಿತು. ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.
‘ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಗಾಯಗೊಂಡ 184 ಜನರನ್ನು ರಫಾದ ಆರೋಗ್ಯ ಕೇಂದ್ರಕ್ಕೆ ತರಲಾಗಿದೆ. ಆಸ್ಪತ್ರೆಗೆ ತರುವಷ್ಟರಲ್ಲೇ ಇವರಲ್ಲಿ19 ಮಂದಿ ಮೃತಪಟ್ಟಿದ್ದರು’ ಎಂದು ರೆಡ್ಕ್ರಾಸ್ನ ಅಂತರರಾಷ್ಟ್ರೀಯ ಸಮಿತಿಯ ವಕ್ತಾರರೊಬ್ಬರು ತಿಳಿಸಿದ್ದಾರೆ.
‘ಪರಿಹಾರ ವಿತರಣೆ ಕೇಂದ್ರಕ್ಕೆ ಬಂದ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದೆ ಎನ್ನುವುದನ್ನು ಇಸ್ರೇಲ್ ಸೇನೆ ಅಲ್ಲಗಳೆದಿದೆ. ಸಾವಿನ ಸಂಖ್ಯೆಯು ಹಮಾಸ್ನ ಕಟ್ಟು ಕಥೆ’ ಎಂದು ಹೇಳಿದೆ.
‘ಪರಿಹಾರ ಪಡೆಯಲು ಸೇರಿದ್ದ ಪ್ಯಾಲೆಸ್ಟೀನಿಯರು ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಮೃತಪಟ್ಟಿರುವ ವಿಚಾರ ಗಾಬರಿ ಮೂಡಿಸಿದೆ. ಘಟನೆ ಬಗ್ಗೆ ಸ್ವಂತಂತ್ರ ತನಿಖೆ ನಡೆಯಬೇಕು’ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಆಗ್ರಹಿಸಿದ್ದಾರೆ.
ದಕ್ಷಿಣ ಗಾಜಾ ಪಟ್ಟಿ ವ್ಯಾಪ್ತಿಯ ಜಿಲ್ಲೆಗಳ ನಿವಾಸಿಗಳಿಗೆ ಹೊಸ ಸ್ಥಳಾಂತರ ಆದೇಶವನ್ನು ಇಸ್ರೇಲ್ ಸೇನೆ ಹೊರಡಿಸಿದ್ದು, ಮುಂಬರುವ ದಿನಗಳಲ್ಲಿ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸುವ ಸೂಚನೆ ನೀಡಿದೆ.
ನಿವಾಸಿಗಳು ಹೊಸ ಸ್ಥಳಾಂತರ ಆದೇಶದ ಅನ್ವಯ ಮಾವಸಿ ಪರಿಹಾರ ತಾಣದತ್ತ ಸಾಗುವಂತೆ ಇಸ್ರೇಲ್ ಸೇನೆ ಹೇಳಿದೆ. ಆದರೆ, ಈ ಜಾಗವು ಸುರಕ್ಷಿತವಲ್ಲ ಎಂದು ಪ್ಯಾಲೆಸ್ಟೀನ್ನ ಮತ್ತು ವಿಶ್ವಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.
ಜಿನೇವಾ (ಎಎಫ್ಪಿ): ಗಾಜಾ ಪಟ್ಟಿಯ ಪರಿಹಾರ ವಿತರಣೆ ಕೇಂದ್ರದ ಮೇಲೆ ಇಸ್ರೇಲ್ ಸೇನೆ ನಡೆಸಿದ ಮಾರಣಾಂತಿಕ ದಾಳಿಯು ‘ಯುದ್ಧಾಪರಾಧ‘ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ವೋಲ್ಕರ್ ಟರ್ಕ್ ಹೇಳಿದ್ದಾರೆ.
‘ಪ್ರತಿ ದಾಳಿಯ ಬಗ್ಗೆಯೂ ನಿಕ್ಷಷ್ಪಪಾತ ತನಿಖೆ ನಡೆಯಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.