ಅಯಾತೊಲ್ಲಾ ಅಲಿ ಖಮೇನಿ
ರಾಯಿಟರ್ಸ್ ಚಿತ್ರ
ಜೆರುಸಲೇಂ: ಸಂಘರ್ಷದ ಸಮಯದಲ್ಲಿ ಅವಕಾಶ ದೊರೆತಿದ್ದರೆ ಇರಾನ್ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿಯನ್ನು ಹತ್ಯೆ ಮಾಡುತ್ತಿದ್ದೆವು ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ.
ರೇಡಿಯೊ ಕಾರ್ಯಕ್ರಮದಲ್ಲಿ ಗುರುವಾರ ಸಂಜೆ ಮಾತನಾಡಿರುವ ಕಾಟ್ಜ್, 'ಸಾಕಷ್ಟು ಹುಡುಕಾಟ ನಡೆಸಿದ್ದೆವು. ಆತ (ಖಮೇನಿ) ನಮ್ಮ ಕಣ್ಣಿಗೆ ಬಿದ್ದಿದ್ದರೆ ಹತ್ಯೆ ಮಾಡುತ್ತಿದ್ದೆವು' ಎಂದಿದ್ದಾರೆ.
'ನಮ್ಮ ಯೋಜನೆಯನ್ನು ಅರ್ಥಮಾಡಿಕೊಂಡ ಖಮೇನಿ, ಕಮಾಂಡರ್ಗಳೊಂದಿಗೆ ಸಂಪರ್ಕ ಕಡಿದುಕೊಂಡು ಭೂಗತವಾದರು. ಹಾಗಾಗಿಯೇ, ನಮ್ಮ ಯೋಜನೆ ಕೈಗೂಡಲಿಲ್ಲ' ಎಂದು ತಿಳಿಸಿದ್ದಾರೆ.
ಕದನ ವಿರಾಮ ಘೋಷಣೆಗೂ ಮೊದಲಿದ್ದ ಪರಿಸ್ಥಿತಿಗೂ, ನಂತರದ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಹಾಗಾಗಿ, ಹತ್ಯೆ ಯತ್ನವನ್ನು ಕೈಬಿಟ್ಟಿದ್ದೇವೆ ಎಂದೂ ಸ್ಪಷ್ಟಪಡಿಸಿದ್ದಾರೆ.
ಸಂಘರ್ಷದ ಸಂದರ್ಭದಲ್ಲಿ ಖಮೇನಿಯನ್ನು ಹತ್ಯೆ ಮಾಡುತ್ತೇವೆ ಎಂದು ಇಸ್ರೇಲ್ ಘೋಷಿಸಿತ್ತು.
ಇಸ್ರೇಲ್ ಪಡೆಗಳು ಇರಾನ್ ಮೇಲೆ ಜೂನ್ 13ರಂದು ದಾಳಿ ಮಾಡುವುದರೊಂದಿಗೆ, ಉಭಯ ರಾಷ್ಟ್ರಗಳ ನಡುವೆ ಸಂಘರ್ಷ ಆರಂಭವಾಗಿತ್ತು. ಯುದ್ಧದಲ್ಲಿ ಮಧ್ಯಪ್ರವೇಶಿಸಿದ್ದ ಅಮೆರಿಕ, ಇರಾನ್ನ ಮೂರು ಪ್ರಮುಖ ಪರಮಾಣು ಮೂಲಸೌಕರ್ಯಗಳ ಮೇಲೆ ಜೂನ್ 22ರಂದು ದಾಳಿ ಮಾಡಿತ್ತು. ಇದರೊಂದಿಗೆ ಸಂಘರ್ಷ ಮತ್ತಷ್ಟು ಉದ್ವಿಗ್ನಗೊಂಡಿತ್ತು.
ಅಮೆರಿಕ ದಾಳಿಯಿಂದ ಕೆರಳಿದ ಇರಾನ್, ಕತಾರ್ ಹಾಗೂ ಇರಾಕ್ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿ ತಿರುಗೇಟು ನೀಡಿತ್ತು.
ಜೂನ್ 24ರಂದು ಕದನಕ್ಕೆ ವಿರಾಮ ಘೋಷಣೆಯಾಗಿದ್ದು, ಸದ್ಯ ಸಂಘರ್ಷ ಶಮನವಾಗಿದೆ. ಆದರೆ, 12 ದಿನಗಳ ಯುದ್ಧದಲ್ಲಿ ಮೇಲುಗೈ ಸಾಧಿಸಿದ್ದು ತಾವೇ ಎಂದು ಎರಡೂ ದೇಶಗಳು ಹೇಳಿಕೊಳ್ಳುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.