ಢಾಕಾ : ಬಾಂಗ್ಲಾದೇಶದ ಶಿಬಿರಗಳಲ್ಲಿ ನೆಲೆಸಿರುವ 9 ಲಕ್ಷಕ್ಕೂ ಅಧಿಕ ರೋಹಿಂಗ್ಯಾ ನಿರಾಶ್ರಿತರ ನಿರ್ವಹಣೆಗೆ ಹಣಕಾಸು ನೆರವು ಕುರಿತ ಅನಿಶ್ಚಿತತೆ ಮೂಡಿದ್ದು, ಇದು ಆಡಳಿತಕ್ಕೆ ದೊಡ್ಡ ಸವಾಲಾಗಿದೆ ಎಂದು ಸೋಮವಾರ ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
‘ರೋಹಿಂಗ್ಯಾ ನಿರಾಶ್ರಿತರಿಗಾಗಿ ₹ 6,440 ಕೋಟಿ ಅಗತ್ಯವಿತ್ತು. ಈ ವರ್ಷದ ಬಹುತೇಕ ಅವಧಿ ಈಗಾಗಲೇ ಮುಗಿದಿದೆ. ಇದುವರೆಗೂ ಈ ಪೈಕಿ ಶೇ 35ರಷ್ಟು ನೆರವಷ್ಟೇ ಲಭ್ಯವಾಗಿದೆ’ ಎಂದು ಢಾಕಾ ಟ್ರಿಬ್ಯೂನ್ ತಿಳಿಸಿದೆ.
ಹಣಕಾಸು ಕೊರತೆಯಿಂದಾಗಿ ಆರೋಗ್ಯ, ರಕ್ಷಣೆ, ಪೌಷ್ಟಿಕ ಆಹಾರ ಮತ್ತು ಶಿಬಿರಗಳಿರುವ ಸ್ಥಳದ ನಿರ್ವಹಣೆಗೆ ತೊಡಕಾಗಿದೆ. ಇದು, ರೋಹಿಂಗ್ಯಾ ನಿವಾಸಿಗಳ ಜೀವನಶೈಲಿ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ.
2017ರಲ್ಲಿ ರಾಖೈನ್ ರಾಜ್ಯದಲ್ಲಿ ಮ್ಯಾನ್ಮಾರ್ ಸೇನೆ ಕೈಗೊಂಡ ಕಠಿಣ ಕ್ರಮದ ಹಿಂದೆಯೇ ಸುಮಾರು 9 ಲಕ್ಷ ರೋಹಿಂಗ್ಯಾ ನಿವಾಸಿಗಳು ಪಲಾಯನಗೈದಿದ್ದು, ಬಾಂಗ್ಲಾದೇಶದ ಕಾಕ್ಸ್ ಬಜಾರ್ನಲ್ಲಿನ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.
ನಿವಾಸಿಗಳಿಗೆ ರಾಖೈನ್ಗೆ ಮರಳಲು ಅವಕಾಶ ನೀಡಬೇಕು. ಪೌರತ್ವದ ಹಕ್ಕು ನೀಡಬೇಕು ಎಂದು ಮ್ಯಾನ್ಮಾರ್ ಮೇಲೆ ಅಂತರರಾಷ್ಟ್ರೀಯದ ಒತ್ತಡವಿದೆ. ಫೆ.15ರಂದು ಜಿನಿವಾದಲ್ಲಿ ಜಂಟಿ ಹೊಣೆಗಾರಿಕೆ ಯೋಜನೆ 2019 (ಜೆಪಿಆರ್) ಪ್ರಕಟಿಸಿದ್ದು, ನಿವಾಸಿಗಳಿಗೆ 2019ರ ಜನವರಿಯಿಂದ ಡಿಸೆಂಬರ್ವರೆಗಿನ ವೆಚ್ಚ ಭರಿಸಲು ನೆರವು ಕೋರಲಾಗಿತ್ತು.
ವಿಶ್ವಸಂಸ್ಥೆಯ ಒಸಿಎಚ್ಎ ಕಚೇರಿ ಅನುಸಾರ, ಈವರೆಗೆ ₹ 2,310 ಕೋಟಿ ನೆರವು ನೀಡಲಾಗಿದೆ. ಇದು, ಜೆಪಿಆರ್ 2019ಕ್ಕಿಂತ ಶೇ 33ರಷ್ಟು ಕಡಿಮೆ. ವರ್ಷ ಮುಗಿಯಲು ಕೆಲವೇ ತಿಂಗಳಿದ್ದು, ಹಿಂದಿನ ವರ್ಷದಂತೆ ನೆರವು ಸಾಧ್ಯವಾಗದೇ ಇರಬಹುದು ಎಂದು ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.