ADVERTISEMENT

ಆಡಳಿತ ಸುಧಾರಣೆಗೆ ಸಂವಿಧಾನ ತಿದ್ದುಪಡಿಯ ಪ್ರಸ್ತಾಪವಿಟ್ಟ ಲಂಕಾ ಪ್ರಧಾನಿ

ಪಿಟಿಐ
Published 19 ಏಪ್ರಿಲ್ 2022, 7:12 IST
Last Updated 19 ಏಪ್ರಿಲ್ 2022, 7:12 IST
   

ಕೊಲಂಬೊ: ಹಿಂದೆಂದೂ ಕಾಣದ ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾ ತತ್ತರಿಸುತ್ತಿದೆ. ಆರ್ಥಿಕತೆಯನ್ನು ಸೂಕ್ತವಾಗಿ ನಿಭಾಯಿಸುವಲ್ಲಿ ವಿಫಲವಾದ ಅಲ್ಲಿನ ಸರ್ಕಾರದ ವಿರುದ್ಧ ದೊಡ್ಡ ಪ್ರಮಾಣದ ಪ್ರತಿಭಟನೆಗಳು ನಡೆಯುತ್ತಿವೆ. ಈ ನಡುವೆಯೇ, ಜನರ ಆಶೋತ್ತರಗಳನ್ನು ಪೂರೈಸುವ ಜವಾಬ್ದಾರಿಯುತ ಆಡಳಿತ ನೀಡಲು ಸಂವಿಧಾನ ತಿದ್ದುಪಡಿ ಮಾಡಬೇಕೆಂಬ ಪ್ರಸ್ತಾಪವನ್ನು ಸಂಪುಟದ ಮುಂದಿಡಲು ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ಮುಂದಾಗಿದ್ದಾರೆ.

ಜನರ ಆಶೋತ್ತರಗಳನ್ನು ಈಡೇರಿಸುವ ಸಲುವಾಗಿ ಮಹಿಂದಾ ರಾಜಪಕ್ಸ ಅವರು ಸಂಪುಟ ಸಭೆಯಲ್ಲಿ ಹೊಸ ಸಾಂವಿಧಾನಿಕ ತಿದ್ದುಪಡಿಯನ್ನು ಪ್ರಸ್ತಾಪಿಸಲು ಉದ್ದೇಶಿಸಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ಸೋಮವಾರ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.

‘ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗವನ್ನು ಒಳಗೊಂಡಿರುವ ಸಂವಿಧಾನದ ತಿದ್ದುಪಡಿ ಪ್ರಸ್ತಾಪವನ್ನು ಪ್ರಧಾನಿ, ಸಂಪುಟ ಸಭೆಯಲ್ಲಿ ಪ್ರಸ್ತಾಪಿಸುವ ನಿರೀಕ್ಷೆಯಿದೆ’ಎಂದು ಸರ್ಕಾರಿ ಡೈಲಿ ನ್ಯೂಸ್ ಪತ್ರಿಕೆ ಮಂಗಳವಾರ ವರದಿ ಮಾಡಿದೆ.

ADVERTISEMENT

ಜವಾಬ್ದಾರಿಯುತವಾಗಿರುವ ಸರ್ಕಾರವನ್ನು ರಚಿಸಲು ವಿವಿಧ ವಲಯಗಳಿಂದ ಬಂದ ಮನವಿಗಳ ಬಗ್ಗೆ ವಿಶೇಷ ಗಮನ ಹರಿಸಿರುವುದಾಗಿ ರಾಜಪಕ್ಸ ಹೇಳಿದ್ದಾರೆ ಎಂದು ಕೊಲಂಬೊ ಪೇಜ್ ನ್ಯೂಸ್ ಪೋರ್ಟಲ್ ವರದಿ ಮಾಡಿದೆ.

ಆ ವಿನಂತಿಗಳ ಆಧಾರದ ಮೇಲೆ, ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ಸಕಾರಾತ್ಮಕ ಅಂಶಗಳನ್ನು ಒಳಗೊಂಡಿರುವ ಸಾಂವಿಧಾನಿಕ ತಿದ್ದುಪಡಿಯ ಹೊಸ ಪ್ರಸ್ತಾವನೆಯನ್ನು ಸಂಪುಟ ಸಭೆಯಲ್ಲಿ ಮಂಡಿಸಲು ಅವರು ಆಶಿಸುತ್ತಿದ್ದಾರೆ ಎಂದು ಅದು ಹೇಳಿದೆ.

‘ತಿದ್ದುಪಡಿಗೊಂಡ ಸಂವಿಧಾನವು ಜನರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ ಎಂಬುದು ನನ್ನ ಆಶಯ’ ಎಂದು ಪ್ರಧಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

1948ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರ ಶ್ರೀಲಂಕಾ ಇದೇ ಮೊದಲ ಬಾರಿಗೆ ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ದೇಶವು ಆಹಾರ, ಔಷಧಿಗಳು ಮತ್ತು ಇಂಧನದ ಆಮದುಗಳಿಗೂ ಪಾವತಿಸಲು ವಿದೇಶಿ ಕರೆನ್ಸಿಯ ತೀವ್ರ ಕೊರತೆ ಎದುರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.