ವಾಷಿಂಗ್ಟನ್: ‘ಮುಂಬೈ ಭಯೋತ್ಪಾದಕ ದಾಳಿಯ ಅಪರಾಧಿ ಡೇವಿಡ್ ಹೆಡ್ಲಿಯನ್ನು ಭಾರತಕ್ಕೆ ಹಸ್ತಾಂತರಿಸಲಾಗದು. ಆದರೆ, ಪ್ರಕರಣದ ಸಹ ಸಂಚುಕೋರ, ಪಾಕಿಸ್ತಾನ ಮೂಲದ ಕೆನಡಾದ ವ್ಯಾಪಾರಿ ತಹಾವುರ್ ರಾಣಾ, ಹಸ್ತಾಂತರ ಕುರಿತ ವಿಚಾರಣೆಯನ್ನು ಎದುರಿಸಬೇಕು’ ಎಂದು ಅಮೆರಿಕದ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ರಾಣಾನ ಜಾಮೀನು ಅರ್ಜಿಗೆ ವಕೀಲರು ವಿರೋಧ ವ್ಯಕ್ತಪಡಿಸಿದ್ದಾರೆ.
ಡೇವಿಡ್ ಹೆಡ್ಲಿಯ ಬಾಲ್ಯದ ಸ್ನೇಹಿತ, 2008ರ ಮುಂಬೈ ದಾಳಿ ಪ್ರಕರಣದ ಸಹ ಸಂಚುಕೋರ ರಾಣಾನನ್ನು (59) ಹಸ್ತಾಂತರಿಸುವಂತೆ ಭಾರತ ಮಾಡಿದ್ದ ಮನವಿಯ ಹಿನ್ನೆಲೆಯಲ್ಲಿ ಜೂನ್ 10ರಂದು ಲಾಸ್ಏಂಜಲಿಸ್ ಪಟ್ಟಣದಲ್ಲಿ ಆತನನ್ನು ಪುನಃ ಬಂಧಿಸಲಾಗಿತ್ತು. ರಾಣಾನನ್ನು ‘ತಲೆಮರೆಸಿಕೊಂಡ ಆರೋಪಿ’ ಎಂದು ಭಾರತ ಘೋಷಿಸಿದೆ.
ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್ ಎ–ತೆಯಬಾ ಹಾಗೂ ಹರ್ಕತ್ ಉಲ್–ಜಿಹಾದ್ ಎ–ಇಸ್ಲಾಮಿ ಸಂಘಟನೆಗಳು ಮುಂಬೈ ದಾಳಿಯ ಸಂಚು ರೂಪಿಸಿದ್ದವು. ಯೋಜನೆಯನ್ನು ಕಾರ್ಯಗತಗೊಳಿಸಲು ರಾಣಾ ಹಾಗೂ ಹೆಡ್ಲಿ ಅವರು 2006ರಿಂದ 2008ರವರೆಗಿನ ಅವಧಿಯಲ್ಲಿ ಈ ಸಂಘಟನೆಗಳಿಗೆ ನೆರವಾಗಿದ್ದರು. ಆನಂತರ ಹೆಡ್ಲಿಯನ್ನಯ ಸರ್ಕಾರದ ಪರ ಸಾಕ್ಷಿಯದಾರನನ್ನಾಗಿಸಲಾಗಿತ್ತು. ಪ್ರಸಕ್ತ ಆತ ಅಮೆರಿಕದಲ್ಲಿ 35 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.
ರಾಣಾನನ್ನು ಹಸ್ತಾಂತರಿಸಬೇಕೆಂಬ ಭಾರತದ ಮನವಿಯ ವಿಚಾರಣೆಯನ್ನು ಅಮೆರಿಕವು ಇನ್ನೂ ಆರಂಭಿಸಿಲ್ಲ. ಆದರೆ, ಶೀಘ್ರದಲ್ಲೇ ಅದನ್ನು ಅರಂಭಿಸುವ ನಿರೀಕ್ಷೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.