ADVERTISEMENT

ಮ್ಯಾನ್ಮಾರ್‌ನಲ್ಲಿ ಮಿಲಿಟರಿ ದಂಗೆ: ಮೃತಪಟ್ಟ ನಾಗರಿಕರ ಸಂಖ್ಯೆ 550

ಏಜೆನ್ಸೀಸ್
Published 3 ಏಪ್ರಿಲ್ 2021, 8:12 IST
Last Updated 3 ಏಪ್ರಿಲ್ 2021, 8:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಯಾಂಗೊನ್: ಮ್ಯಾನ್ಮಾರ್‌ನಲ್ಲಿ ಮಿಲಿಟರಿ ದಂಗೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹತ್ತಿಕ್ಕಲು ಸೇನೆ ನಡೆಸುತ್ತಿರುವ ದೌರ್ಜನ್ಯದಿಂದ ಮೃತಪಟ್ಟ ನಾಗರಿಕರ ಸಂಖ್ಯೆ 550ಕ್ಕೆ ತಲುಪಿದೆ ಎಂದು ಮಾನವ ಹಕ್ಕುಗಳ ಗುಂಪು ತಿಳಿಸಿದೆ.

ಸತ್ತವರಲ್ಲಿ 46 ಮಕ್ಕಳು ಸೇರಿದ್ದಾರೆ. ಸುಮಾರು 2751 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದಿರುವವರಲ್ಲಿ ಕೆಲವರು ಶಿಕ್ಷೆಗೊಳಗಾಗಿರಬಹುದು ಎಂದು ಈ ಗುಂಪು ಮಾಹಿತಿ ನೀಡಿದೆ.

ಪ್ರತಿಭಟನೆಗಳನ್ನು ಹತ್ತಿಕ್ಕಲು ಮಿಲಿಟರಿ ಆಡಳಿತ ಎಷ್ಟೇ ಪ್ರಯತ್ನಿಸುತ್ತಿದ್ದರೂ, ಪ್ರತಿಭಟನೆಗಳು ನಡೆಯುತ್ತಲೇ ಇವೆ.

ADVERTISEMENT

ಈ ನಡುವೆ ಶುಕ್ರವಾರ ಯಾಂಗೂನ್‌ ಮಾರ್ಕೆಟ್‌ ಬಳಿ ಸಿಎನ್‌ಎನ್‌ ವರದಿಗಾರರೊಂದಿಗೆ ಮಾತನಾಡುತ್ತಿದ್ದ ಐವರು ವ್ಯಕ್ತಿಗಳನ್ನು ಮಫ್ತಿಯಲ್ಲಿದ್ದ ಪೊಲೀಸರು ವಶಕ್ಕಪಡೆದಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿಮಾಡಿದೆ.

ಬಂಧನಕ್ಕೊಳಗಾಗುತ್ತಿದ್ದಂತೆ ಇಬ್ಬರು ಮಹಿಳೆಯರು ಸಹಾಯಕ್ಕಾಗಿ ಕೂಗಿದರು ಎಂದು ಮ್ಯಾನ್ಮಾರ್ ‘ನೌ’ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದೇ ವೇಳೆ ಸಶಸ್ತ್ರ ಪೊಲೀಸ್ ಅಧಿಕಾರಿ ‘ಯಾರಾಗಿದರೂ ಇವರಿಗೆ ಸಹಾಯ ಮಾಡುವ ಧೈರ್ಯವಿದೆಯೇ‘ ಎಂದು ಪ್ರಶ್ನಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ‘ಈ ಪೊಲೀಸ್ ಅಧಿಕಾರಿ ಪಿಸ್ತೂಲ್ ತೋರಿಸಿ, ಅಲ್ಲಿದ್ದ ಇಬ್ಬರು ಮಹಿಳೆಯರನ್ನು ಬಲವಂತವಾಗಿ ಕರೆದುಕೊಂಡು ಹೋದರು‘ ಎಂದು ಪ್ರತ್ಯಕ್ಷದರ್ಶಿ ಘಟನೆಯನ್ನು ವಿವರಿಸಿದ್ದಾರೆ.

ಏತನ್ಮಧ್ಯೆ, ದಶಕಗಳಿಂದ ಸರ್ಕಾರದ ವಿರುದ್ಧ ಹೋರಾಡುತ್ತಿರುವ ಜನಾಂಗೀಯ ಅಲ್ಪಸಂಖ್ಯಾತ ಬಂಡಾಯ ಗುಂಪನ್ನು ಪ್ರತಿನಿಧಿಸುವ ಕರೆನ್ ರಾಷ್ಟ್ರೀಯ ಒಕ್ಕೂಟವು ಸೇನಾ ಪಡೆಗಳ ದೌರ್ಜನ್ಯವನ್ನು ಖಂಡಿಸಿದೆ. ’ಈ ದಾಳಿಯಿಂದ ಮಕ್ಕಳು, ವಿದ್ಯಾರ್ಥಿಗಳು ಸೇರಿದಂತೆ ನೂರಾರು ಮಂದಿ ಮೃತಪಟ್ಟಿದ್ದಾರೆ. ಇದು ಶಾಲೆಗಳು, ವಸತಿ ಪ್ರದೇಶಗಳು ಮತ್ತು ಹಳ್ಳಿಗಳ ನಾಶಕ್ಕೆ ಕಾರಣವಾಗಿದೆ. ಈ ಭಯೋತ್ಪಾದಕ ಕೃತ್ಯಗಳು ಸ್ಪಷ್ಟವಾಗಿ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಾಗಿದೆ‘ ಎಂದು ಗುಂಪು ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.