ADVERTISEMENT

ಐಕ್ಯತಾ ದಿನ: 800 ಕೈದಿಗಳಿಗೆ ಕ್ಷಮಾದಾನ ಘೋಷಿಸಿದ ಮ್ಯಾನ್ಮಾರ್ ಸೇನೆ

ಏಜೆನ್ಸೀಸ್
Published 12 ಫೆಬ್ರುವರಿ 2022, 6:44 IST
Last Updated 12 ಫೆಬ್ರುವರಿ 2022, 6:44 IST
ಸಾಂದರ್ಭಿಕ ಚಿತ್ರ (ಕೃಪೆ: ರಾಯಿಟರ್ಸ್)
ಸಾಂದರ್ಭಿಕ ಚಿತ್ರ (ಕೃಪೆ: ರಾಯಿಟರ್ಸ್)   

ಯಾಂಗೂನ್‌: ಮ್ಯಾನ್ಮಾರ್‌ನ ರಾಷ್ಟ್ರೀಯ ಐಕ್ಯತಾ ದಿನದ ಸ್ಮರಣಾರ್ಥವಾಗಿ ರಾಜಧಾನಿನಾಯ್ಪಿಟಾವ್‌ನಲ್ಲಿ ಸೇನಾ ಶಕ್ತಿ ಪ್ರದರ್ಶನ ಮತ್ತು ಪರೇಡ್‌ ನಡೆಸಲಾಗುತ್ತಿದ್ದು, 800ಕ್ಕೂ ಹೆಚ್ಚು ಕೈದಿಗಳಿಗೆ ಕ್ಷಮಾದಾನ ನೀಡುವುದಾಗಿ ಅಲ್ಲಿನಸೇನೆ ಶನಿವಾರ ಘೋಷಿಸಿದೆ.

ಸೇನಾಧಿಕಾರಿಗಳ ಸಮಿತಿ 'ಜುಂಟಾ'ದ ಮುಖ್ಯಸ್ಥ ಮಿನ್ ಆಂಗ್ ಹ್ಲೈಂಗ್ ಅವರು 'ಕ್ಷಮಾದಾನದ ಆದೇಶ' ಹೊರಡಿಸಿದ್ದಾರೆ. ಅದರಂತೆ, ದೇಶದ 75ನೇ ಐಕ್ಯತಾ ದಿನ ಆಚರಣೆಯ ಅಂಗವಾಗಿ 814 ಕೈದಿಗಳಿಗೆಕ್ಷಮಾದಾನ ನೀಡಲಾಗುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕ್ಷಮಾದಾನ ಪಡೆದವರಲ್ಲಿ ಹೆಚ್ಚಿನವರು, ದೇಶದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಯಾಂಗೂನ್‌ನ ಜೈಲುಗಳಲ್ಲಿ ಇರುವವರಾಗಿದ್ದಾರೆ ಎಂದು 'ಜುಂಟಾ'ದ ವಕ್ತಾರ ಜಾವ್ ಮಿನ್ ಟುನ್ ತಿಳಿಸಿದ್ದಾರೆ. ಆದರೆ,ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಸೆರೆವಾಸದಲ್ಲಿರುವ, ಆಸ್ಟ್ರೇಲಿಯಾ ಮೂಲದ ಆರ್ಥಿಕ ಸಲಹೆಗಾರ ಸೀನ್ ಟರ್ನಲ್ ಅವರು ಬಿಡುಗಡೆಯಾಗಲಿದ್ದಾರೆ ಎಂಬ ಬಗ್ಗೆ ಅವರು ಮಾಹಿತಿ ನೀಡಿಲ್ಲ.

ADVERTISEMENT

ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿರುವಟರ್ನಲ್ ಅವರು, ಮ್ಯಾನ್ಮಾರ್‌ನ ನಾಗರಿಕ ಹೋರಾಟಗಾರ್ತಿ ಆಂಗ್ ಸಾನ್ ಸೂಕಿ ಅವರಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸೇನಾ ದಂಗೆ ನಡೆದ ಕೆಲವೇ ದಿನಗಳ ಬಳಿಕ (ಕಳೆದ ವರ್ಷ ಫೆಬ್ರುವರಿಯಲ್ಲಿ) ಟರ್ನಲ್ ಅವರನ್ನು ಬಂಧಿಸಲಾಗಿತ್ತು. ಅವರ ವಿರುದ್ಧ, ಮ್ಯಾನ್ಮಾರ್‌ನ ಅಧಿಕೃತ ರಹಸ್ಯ ಕಾಯ್ದೆ ಉಲ್ಲಂಘಿಸಿದ ಆರೋಪ ಹೊರಿಸಲಾಗಿದ್ದು, ಆಪಾದನೆ ಸಾಬೀತಾದರೆ ಗರಿಷ್ಠ 14 ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಕಳೆದ ವರ್ಷ ನಡೆದ ಸೇನಾ ದಂಗೆಯಿಂದ ಮ್ಯಾನ್ಮಾರ್‌ನಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಇದೆ.ಸಾಮೂಹಿಕ ಪ್ರತಿಭಟನೆ ವೇಳೆ1,500ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.