ಕಠ್ಮಂಡು: ಇತ್ತೀಚಿಗೆ ಪ್ರಾರಂಭವಾದ ಕುರ್ತಾ–ಜಯನಗರ ರೈಲು ಮಾರ್ಗದ ಮೂಲಕ ಭಾರತಕ್ಕೆ ತೆರಳಲು ವಿದೇಶಿ ಪ್ರಜೆಗಳಿಗೆ ನೇಪಾಳ ಅನುಮತಿ ನೀಡುವುದಿಲ್ಲ ಎಂದು ಮಾಧ್ಯಮ ವರದಿಯೊಂದು ಶನಿವಾರ ಇಲ್ಲಿ ಹೇಳಿದೆ.
ಭದ್ರತೆಯ ದೃಷ್ಟಿಯಿಂದ ಆಕ್ಷೇಪ ಸೂಚಿಸಿದ ಕಾರಣ ನೇಪಾಳ ಈ ನಿರ್ಧಾರ ಕೈಗೊಂಡಿದೆ ಎಂದೂ ವರದಿ ಹೇಳಿದೆ.
‘ಗಡಿಯಾಚೆಗಿನ ರೈಲ್ವೆ ಕಾಮಗಾರಿಗಾಗಿ ಅನುಸರಿಸಬೇಕಾದ ಕಾರ್ಯ ವಿಧಾನಗಳನ್ನು (ಎಸ್ಒಪಿ) ಅಂತಿಮಗೊಳಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ರೈಲ್ವೆ ಇಲಾಖೆಯ ಮಹಾನಿರ್ದೇಶಕ ದೀಪಕ್ ಕುಮಾರ್ ಭಟ್ಟರಾಯ್ ಹೇಳಿರುವುದಾಗಿ ಕಠ್ಮಂಡು ಪೋಸ್ಟ್ ಪತ್ರಿಕೆ ವರದಿ ಮಾಡಿದೆ.
ಭಾರತವು ಎಸ್ಪಿಎ ಅನ್ನು ಅಂತಿಮಗೊಳಿಸಲು ತಡಮಾಡಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಭಟ್ಟರಾಯ್ ಹೇಳಿದರು.
ಅಕ್ಟೋಬರ್ 22 ರಂದು ಭಾರತವು ಬಿಹಾರದ ಜಯನಗರದಿಂದ ನೇಪಾಳದ ಕುರ್ತಾಗೆ ಸಂಪರ್ಕಿಸುವ 34.9 ಕಿಮೀ ಉದ್ದದ ಗಡಿಯಾಚೆಗಿನ ರೈಲು ಸಂಪರ್ಕವನ್ನು ನೇಪಾಳ ಸರ್ಕಾರಕ್ಕೆ ಹಸ್ತಾಂತರಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.