ರಾಮಚಂದ್ರ ಪೌದೆಲ್
ಕಠ್ಮಂಡು(ನೇಪಾಳ): ರಾಷ್ಟ್ರದಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆ 2026ರ ಮಾರ್ಚ್ 5ರಂದು ನಡೆಯಲಿದೆ ಎಂದು ಅಧ್ಯಕ್ಷ ರಾಮಚಂದ್ರ ಪೌದೆಲ್ ಅವರ ಕಚೇರಿ ಘೋಷಿಸಿದೆ.
ಹಂಗಾಮಿ ಪ್ರಧಾನಿ ಸುಶೀಲಾ ಕಾರ್ಕಿ ಅವರ ಶಿಫಾರಸಿನ ಮೇರೆಗೆ ಶುಕ್ರವಾರ ತಡರಾತ್ರಿಯೇ ಸಂಸತ್ತನ್ನು ಅಧ್ಯಕ್ಷ ಪೌದೆಲ್ ವಿಸರ್ಜಿಸಿದ್ದರು.
ಈ ಸಂಬಂಧ ಅಧ್ಯಕ್ಷರ ಕಚೇರಿ ಪ್ರಕಟಣೆ ಹೊರಡಿಸಿದೆ. 2025ರ ಸೆಪ್ಟೆಂಬರ್ 12ರ ರಾತ್ರಿ 11 ರಿಂದ ಅನ್ವಯವಾಗುವಂತೆ ಸಂಸತ್ ಅನ್ನು ವಿಸರ್ಜಿಸಲಾಗುತ್ತಿದ್ದು, 2026ರ ಮಾರ್ಚ್ 5ಕ್ಕೆ ಸಾರ್ವತ್ರಿಕ ಚುನಾವಣೆಯನ್ನು ನಿಗದಿ ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ನೂತನ ಹಂಗಾಮಿ ಪ್ರಧಾನಿ ಆಗಿರುವ ಸುಶೀಲಾ ಕಾರ್ಕಿ ಅವರು ಗೃಹ ಸಚಿವರು, ವಿದೇಶಾಂಗ ಹಾಗೂ ರಕ್ಷಣಾ ಸಚಿವರು ಸೇರಿದಂತೆ ಕೆಲವೇ ಸಚಿವರನ್ನು ಒಳಗೊಂಡ ಸಂಪುಟವನ್ನು ನಾಳೆ(ಭಾನುವಾರ) ರಚಿಸಲಿದ್ದಾರೆ ಎಂದು ಅಧ್ಯಕ್ಷರ ಕಚೇರಿಯ ಮೂಲಗಳು ತಿಳಿಸಿವೆ.
ಅಲ್ಲದೇ, ‘ಜೆನ್–ಝೀ’ ಪ್ರತಿಭಟನೆ ವೇಳೆ ಪ್ರಧಾನಿ ಕಚೇರಿಯ ಕಟ್ಟಡವೂ ಬೆಂಕಿಗೆ ಆಹುತಿಯಾಗಿರುವ ಕಾರಣ ಸಿಂಗದರ್ಬಾರ್ ಸಂಕೀರ್ಣದಲ್ಲಿ ಗೃಹ ಸಚಿವಾಲಯಕ್ಕಾಗಿ ನೂತನವಾಗಿ ನಿರ್ಮಿಸಿರುವ ಕಚೇರಿಯನ್ನೇ ಪ್ರಧಾನಿ ಕಚೇರಿಯನ್ನಾಗಿ ಮಾರ್ಪಾಡು ಮಾಡಲಾಗುತ್ತಿದೆ ಎಂದೂ ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.