ADVERTISEMENT

ನೇಪಾಳ ಸಂಸತ್ತು ವಿಸರ್ಜಿಸಿದ ರಾಷ್ಟ್ರಪತಿ: ನವೆಂಬರ್‌ನಲ್ಲಿ ಸಾರ್ವತ್ರಿಕ ಚುನಾವಣೆ

ರಾಯಿಟರ್ಸ್
Published 22 ಮೇ 2021, 3:45 IST
Last Updated 22 ಮೇ 2021, 3:45 IST
ಕೆ.ಪಿ. ಶರ್ಮಾ ಒಲಿ: ರಾಯಿಟರ್ಸ್ ಚಿತ್ರ
ಕೆ.ಪಿ. ಶರ್ಮಾ ಒಲಿ: ರಾಯಿಟರ್ಸ್ ಚಿತ್ರ   

ಕಾಠ್ಮಂಡು: ನೇಪಾಳದ ರಾಷ್ಟ್ರಪತಿ ವಿದ್ಯಾ ದೇವಿ ಭಂಡಾರಿ ಅವರು ಶನಿವಾರ ನೇಪಾಳ ಸರ್ಕಾರವನ್ನು ವಿಸರ್ಜಿಸಿ ನವೆಂಬರ್‌ನಲ್ಲಿ ಸಾರ್ವತ್ರಿಕ ಚುನಾವಣೆ ನಿಗದಿ ಮಾಡಿದ್ದಾರೆ.

ಉಸ್ತುವಾರಿ ಪ್ರಧಾನಿ ಕೆ.ಪಿ. ಶರ್ಮಾ ಒಲಿಯಾಗಲಿ, ವಿರೋಧ ಪಕ್ಷದ ನಾಯಕರಾಗಲಿ ಶುಕ್ರವಾರ ನಿಗದಿಪಡಿಸಿದ ಗಡುವಿನೊಳಗೆ ಸರ್ಕಾರ ರಚನೆಗೆ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾಗಿರುವ ಬೆನ್ನಲ್ಲೇ ರಾಷ್ಟ್ರಪತಿ ಅವರಿಂದ ಈ ಅಚ್ಚರಿಯ ಪ್ರಕಟಣೆ ಹೊರಬಿದ್ದಿದೆ.

‘ರಾಷ್ಟ್ರಪತಿಗಳು ಜನಪ್ರತಿನಿಧಿಗಳ ಸಭೆಯನ್ನು ವಿಸರ್ಜಿಸಿದ್ದಾರೆ. ಮೊದಲ ಹಂತದ ಸಾರ್ವತ್ರಿಕ ಚುನಾವಣೆಯನ್ನು ನವೆಂಬರ್ 12 ರಂದು ಮತ್ತು ಎರಡನೇ ಹಂತದ ಚುನಾವಣೆಯನ್ನು ನವೆಂಬರ್ 19 ರಂದು ನಡೆಸಲು ಆದೇಶಿಸಲಾಗಿದೆ’ಎಂದು ಮಧ್ಯರಾತ್ರಿ ಹೊರಡಿಸಿರುವ ರಾಷ್ಟ್ರಪತಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ಉಸ್ತುವಾರಿ ಪ್ರಧಾನಿ ಒಲಿ ನೇತೃತ್ವದ ಕ್ಯಾಬಿನೆಟ್‌ನ ಶಿಫಾರಸಿನ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 2020 ರ ಡಿಸೆಂಬರ್‌ನಲ್ಲಿ ಒಲಿ ನೇತೃತ್ವದ ಕ್ಯಾಬಿನೆಟ್ ಮಾಡಿದ್ದ ಸಂಸತ್ತಿನ ವಿಸರ್ಜನೆಯ ನಿರ್ಧಾರದ ವಿರುದ್ಧ ಭಾರೀ ಪ್ರತಿಭಟನೆ ಭುಗಿಲೆದ್ದಿತ್ತು. ಬಳಿಕ, ಫೆಬ್ರವರಿಯಲ್ಲಿ ಆ ಆದೇಶ ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.

ಈ ಬೆಳವಣಿಗೆ ಬಗ್ಗೆ ರಾಜಕೀಯ ಪಕ್ಷಗಳಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ನೇಪಾಳವು ಕೊರೊನಾ ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ ತತ್ತರಿಸುತ್ತಿರುವ ನಡುವೆ ಈ ರಾಜಕೀಯ ಮೇಲಾಟಗಳು ಅಲ್ಲಿನ ಜನರನ್ನು ಹೈರಾಣಾಗಿಸಿದೆ. ಪ್ರತಿದಿನ ಅಲ್ಲಿ ಸರಾಸರಿ 8,207 ಹೊಸ ಪ್ರಕರಣಗಳು ದಾಖಲಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.