ಕಠ್ಮಂಡು: ನೇಪಾಳದಲ್ಲಿ ಸರ್ಕಾರದ ವಿರುದ್ಧ ಆರಂಭವಾಗಿರುವ ಪ್ರತಿಭಟನೆಯಿಂದಾಗಿ ಸಂಭವಿಸುತ್ತಿರುವ ಹಿಂಸಾಕೃತ್ಯಗಳು ಇನ್ನೂ ನಿಂತಿಲ್ಲ. ದೇಶದ ಕಾರಾಗೃಹವೊಂದರಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಗುರುವಾರ ನಡೆದ ಘರ್ಷಣೆಯಲ್ಲಿ ಮೂವರು ಕೈದಿಗಳು ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಜೈಲುಗಳಿಂದ 15 ಸಾವಿರಕ್ಕೂ ಹೆಚ್ಚು ಕೈದಿಗಳು ಪರಾರಿಯಾಗಿದ್ದಾರೆ.
ಮಂಗಳವಾರ ದೇಶದಾದ್ಯಂತ ಕಂಡುಬಂದ ಸರ್ಕಾರ ವಿರೋಧಿ ಪ್ರತಿಭಟನೆಗಳ ನಂತರ ಜೈಲು ಸಿಬ್ಬಂದಿಯೊಂದಿಗೆ ನಡೆದ ಘರ್ಷಣೆಗಳಲ್ಲಿ ಮೃತಪಟ್ಟ ಕೈದಿಗಳ ಸಂಖ್ಯೆ 8ಕ್ಕೆ ಏರಿದಂತಾಗಿದೆ.
ಮಾಧೇಶ ಪ್ರಾಂತ್ಯದ ರಾಮೇಛಾಪ್ ಜಿಲ್ಲೆಯ ಜೈಲಿನಲ್ಲಿ ಭದ್ರತಾ ಸಿಬ್ಬಂದಿ ಜೊತೆ ನಡೆದ ಘರ್ಷಣೆಗಳಲ್ಲಿ ಮೂವರು ಕೈದಿಗಳು ಮೃತಪಟ್ಟಿದ್ದು, ಇತರ 13 ಕೈದಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಅನಿಲ ಸಿಲಿಂಡರ್ ಬಳಸಿ ಜೈಲಿನ ಒಂದು ಭಾಗವನ್ನು ಸ್ಫೋಟಿಸಲು ಕೈದಿಗಳು ಯತ್ನಿಸಿದ್ದಾರೆ. ಈ ವೇಳೆ, ಕಂಡುಬಂದ ಗಲಾಟೆ ನಿಯಂತ್ರಿಸಲು ಮುಂದಾದ ಪೊಲೀಸರು ಗುಂಡು ಹಾರಿಸಿದಾಗ ಮೂವರು ಕೈದಿಗಳು ಮೃತಪಟ್ಟರು ಎಂದು ಮೂಲಗಳು ತಿಳಿಸಿವೆ.
ಗಂಡಕಿ ಪ್ರಾಂತ್ಯದ ಕಸ್ಕಿ ಜಿಲ್ಲೆಯ ಜೈಲಿನಿಂದ 773 ಕೈದಿಗಳು ಪರಾರಿಯಾಗಿದ್ದಾರೆ. ಪರಾರಿಯಾದವರಲ್ಲಿ 13 ಮಂದಿ ಭಾರತೀಯ ಪ್ರಜೆಗಳು ಹಾಗೂ ಇತರ ದೇಶಗಳ ನಾಲ್ವರು ಪ್ರಜೆಗಳು ಸೇರಿದ್ದಾರೆ ಎಂದು ಜೈಲರ್ ರಾಜೇಂದ್ರ ಶರ್ಮಾ ತಿಳಿಸಿದ್ದಾರೆ.
ಗಡಿ ದಾಟಿ, ಭಾರತ ಪ್ರವೇಶಿಸಲು ಯತ್ನಿಸುತ್ತಿದ್ದ 13 ಕೈದಿಗಳನ್ನು ಬೈರಗಾನಿಯಾ ಚೆಕ್ಪೋಸ್ಟ್ನಲ್ಲಿ ಭಾರತದ ಸಶಸ್ತ್ರ ಸೀಮಾ ಬಲ(ಎಸ್ಎಸ್ಬಿ) ಯೋಧರು ಬಂಧಿಸಿದ್ದಾರೆ ಎಂದು ನೇಪಾಳ ಪೊಲೀಸರು ಹೇಳಿದ್ದಾರೆ.
‘ಬಂಧಿಸಲಾಗಿರುವ ಎಲ್ಲ ಕೈದಿಗಳನ್ನು ನೇಪಾಳ ಪೊಲೀಸರಿಗೆ ಹಸ್ತಾಂತರಿಸಲಾಗುತ್ತದೆ’ ಎಂದು ಎಸ್ಎಸ್ಬಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.