ADVERTISEMENT

ನೇಪಾಳ: ಸಂಸತ್ತು ವಿಸರ್ಜನೆ– ಭಾರಿ ಬಿಗಿ ಬಂದೋಬಸ್ತ್

‘ಸುಪ್ರೀಂ’ ಮೊರೆಗೆ ಪ್ರತಿಪಕ್ಷಗಳ ಒಕ್ಕೂಟ ಸಜ್ಜು

ಪಿಟಿಐ
Published 23 ಮೇ 2021, 21:05 IST
Last Updated 23 ಮೇ 2021, 21:05 IST
ನೇಪಾಳದ ಕಠ್ಮಂಡುವಿನಲ್ಲಿ ಭಾನುವಾರ ಸಂಸತ್ ವಿಸರ್ಜನೆಯ ಬಳಿಕ ರಾಷ್ಟ್ರಪತಿ ಭವನದ ಮುಂದೆ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಕಾರನನ್ನು ಪೊಲೀಸರು ಬಂಧಿಸಿದ ಕರೆದೊಯ್ದರು –ರಾಯಿಟರ್ಸ್ ಚಿತ್ರ
ನೇಪಾಳದ ಕಠ್ಮಂಡುವಿನಲ್ಲಿ ಭಾನುವಾರ ಸಂಸತ್ ವಿಸರ್ಜನೆಯ ಬಳಿಕ ರಾಷ್ಟ್ರಪತಿ ಭವನದ ಮುಂದೆ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಕಾರನನ್ನು ಪೊಲೀಸರು ಬಂಧಿಸಿದ ಕರೆದೊಯ್ದರು –ರಾಯಿಟರ್ಸ್ ಚಿತ್ರ   

ಕಠ್ಮಂಡು: ನೇಪಾಳದ ರಾಷ್ಟ್ರಪತಿ ವಿದ್ಯಾದೇವಿ ಭಂಡಾರಿ ಅವರು ಶನಿವಾರ ನೇಪಾಳ ಸಂಸತ್ತನ್ನು ವಿಸರ್ಜಿಸಿ ನವೆಂಬರ್‌ನಲ್ಲಿ ಸಾರ್ವತ್ರಿಕ ಚುನಾವಣೆ ನಿಗದಿ ಮಾಡಿದ ಬೆನ್ನಲ್ಲೇ, ಪ್ರತಿಪಕ್ಷಗಳ ಒಕ್ಕೂಟದ ನಾಯಕರು ಈ ನಡೆ ಖಂಡಿಸಿ ಸುಪ್ರೀಂ ಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.

‘ಈ ಎಲ್ಲ ಬೆಳವಣಿಗೆಗಳ ಕಾರಣ ಸುಪ್ರೀಂ ಕೋರ್ಟ್, ಸರ್ಕಾರಿ ಕಚೇರಿಗಳಿಗೆ ಭಾನುವಾರ ಪೊಲೀಸರು ಭಾರಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದಾರೆ’ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

‘ಜನಸಂದಣಿ ಮತ್ತು ಪ್ರತಿಭಟನೆಯನ್ನು ತಪ್ಪಿಸುವ ಉದ್ದೇಶದಿಂದ ಭದ್ರತೆಯನ್ನು ಬಿಗಿಗೊಳಿಸಲಾಗಿದೆ’ ಎಂದು ನೇಪಾಳದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಸರ್ಕಾರದ ಕ್ರಮವನ್ನು ವಿರೋಧಿಸಿ ಭಾನುವಾರ ರಾಜಕೀಯ ಗುಂಪುಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದವು. ಈ ಸಂದರ್ಭದಲ್ಲಿ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ.

ರಾಷ್ಟ್ರಪತಿ ವಿದ್ಯಾದೇವಿ ಅವರು ಐದು ತಿಂಗಳಿನಲ್ಲಿ ಎರಡನೇ ಬಾರಿ ಜನಪ್ರತಿನಿಧಿಗಳ ಸಭೆಯನ್ನು ವಿಸರ್ಜಿಸಿದ್ದಾರೆ. ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರ ಸಲಹೆಯ ಮೇರೆಗೆ ನವೆಂಬರ್‌ನಲ್ಲಿ ಸಾರ್ವತ್ರಿಕ ಚುನಾವಣೆಯನ್ನೂ ಅವರು ಘೋಷಿಸಿದ್ದಾರೆ. ಪ್ರಧಾನಿ ಒಲಿ ಮತ್ತು ಸರ್ಕಾರ ರಚಿಸುವ ಪ್ರತಿಪಕ್ಷಗಳ ಮೈತ್ರಿಕೂಟದ ಹಕ್ಕುಗಳನ್ನು ಅವರು ತಿರಸ್ಕರಿಸಿದ್ದಾರೆ.

ಸಂಸತ್ತನ್ನು ವಿಸರ್ಜಿಸುತ್ತಿದ್ದಂತೆಯೇ ರಾಷ್ಟ್ರಪತಿಗಳ ನಡೆ ಅಸಂವಿಧಾನಿಕವಾದದ್ದು ಎಂದು ದೂರಿ ಪ್ರತಿಪಕ್ಷಗಳ ಮೈತ್ರಿಕೂಟದ ನಾಯಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ. ಈ ಕಾರಣಕ್ಕಾಗಿ ಸಿಂಘದರ್ಬಾರ್–ಸುಪ್ರೀಂ ಕೋರ್ಟ್‌ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಿವೆ ಎಂದು ‘ದಿ ಹಿಮಾಲಯನ್ ಟೈಮ್ಸ್’ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.