ಟೆಲ್ ಅವಿವ್: ಅಗತ್ಯ ಇರುವವರೆಗೂ ಗಾಜಾ ಪಟ್ಟಿಯಲ್ಲಿ ಇಸ್ರೇಲ್ನ ದಾಳಿ ಮುಂದುವರೆಯಲಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಈ ವಿಚಾರವಾಗಿ ಶನಿವಾರ ಮಾತನಾಡಿರುವ ಅವರು, 'ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಹಮಸ್ನ ಬಂಡುಕೋರ ನಾಯಕರು ಕಾರಣವಾಗಿದ್ದಾರೆ. ರಾಕೆಟ್ ದಾಳಿಯಲ್ಲಿ ನಾಗರಿಕರ ಸಾವುನೋವುಗಳನ್ನು ತಪ್ಪಿಸಲು ನನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತೇನೆ' ಎಂದು ತಿಳಿಸಿದ್ದಾರೆ.
'ಪ್ರಸ್ತುತ ಏರ್ಪಟ್ಟಿರುವ ಸಂಘರ್ಷಕ್ಕೆ ನಾವು ಹೊಣೆಗಾರರಲ್ಲ. ಈ ಬಗ್ಗೆ ನಮಗೆ ಯಾವುದೇ ಅಪರಾಧಿ ಭಾವನೆಯೂ ಇಲ್ಲ. ನಮ್ಮ ಮೇಲೆ ಆಕ್ರಮಣ ಮಾಡಿದವರಿಗೆ ಅಪರಾಧಿ ಭಾವನೆ ಇರಬೇಕು' ನೆತನ್ಯಾಹು ಹೇಳಿದ್ದಾರೆ.
'ನಾವು ಇನ್ನೂ ಈ ಕಾರ್ಯಾಚರಣೆಯ ಮಧ್ಯದಲ್ಲಿದ್ದೇವೆ. ಅದು ಇನ್ನೂ ಮುಕ್ತಾಯವಾಗಿಲ್ಲ. ಅಗತ್ಯ ಇರುವವರೆಗೂ ಕಾರ್ಯಾಚರಣೆಯನ್ನು ನಡೆಸಲಿದ್ದೇವೆ' ಎಂದು ಇಸ್ರೇಲ್ ಪ್ರಧಾನಿ ಸ್ಪಷ್ಟಪಡಿಸಿದ್ದಾರೆ.
'ನಾವು ಭಯೋತ್ಪಾದಕರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದೇವೆ. ಹಮಸ್ ಬಂಡುಕೋರರು ನಾಗರಿಕರ ಹಿಂದೆ ಅಡಗಿ ನಾಗರಿಕರ ಮೇಲೆಯೇ ದಾಳಿ ನಡೆಸುತ್ತಿದ್ದಾರೆ. ನಾವು ನಾಗರಿಕರ ಪ್ರಾಣ ಹಾನಿ ಆಗದಂತೆ ಎಚ್ಚರ ವಹಿಸಿದ್ದೇವೆ.' ನೆತನ್ಯಾಹು ತಿಳಿಸಿದ್ದಾರೆ.
ಜೆರುಸಲೇಂನ ಅಲ್-ಅಕ್ಸಾ ಮಸೀದಿಯು ವಿವಾದದ ಕೇಂದ್ರ ಬಿಂದುವಾಗಿದ್ದು, ಮುಸ್ಲಿಂ ಹಾಗೂ ಯಹೂದಿಗಳ ಪವಿತ್ರವಾದ ಸ್ಥಳವಾಗಿದೆ. ಇಲ್ಲಿ ಉಂಟಾದ ಸಂಘರ್ಷವನ್ನು ತಡೆಯಲು ಪೊಲೀಸಲು ಅಶ್ರುವಾಯು ಹಾಗೂ ಗ್ರೆನೇಡ್ ಪ್ರಯೋಗಿಸಿದ್ದರು. ಇದು ಈಗ ಗಾಜಾ ಪಟ್ಟಿಯಲ್ಲಿ ಭಾರಿ ಸಂಘರ್ಷಕ್ಕೆ ತಿರುಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.