ಲಂಡನ್: ಬ್ರಿಟಿಷ್ ತೈಲ ಟ್ಯಾಂಕರ್ ಹಡಗು ವಶಪಡಿಸಿಕೊಂಡಿರುವ ಇರಾನ್ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ. ಟ್ಯಾಂಕರ್ನಲ್ಲಿದ್ದ 23 ಸಿಬ್ಬಂದಿಯ ಪೈಕಿ 18 ಮಂದಿ ಭಾರತೀಯರಿದ್ದಾರೆ.
ಸ್ಟ್ರೈಟ್ ಆಫ್ ಹಾರ್ಮುಜ್ ಜಲಸಂಧಿಯಲ್ಲಿ ಶನಿವಾರ ಈ ಟ್ಯಾಂಕರ್ ವಶಪಡಿಸಿಕೊಳ್ಳಲಾಗಿದ್ದು, ಈ ಘಟನೆಯಿಂದ ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧದ ಆತಂಕ ಮತ್ತಷ್ಟು ಹೆಚ್ಚಾಗಿದೆ. ಇರಾನ್ನ ರೆವಲ್ಯುಷನರಿ ಗಾರ್ಡ್ ‘ಸ್ಟೆನಾ ಇಂಪೆರೋ’ ಹಡಗನ್ನು ವಶಪಡಿಸಿಕೊಂಡಿದೆ. ಈ ನೌಕೆಯಲ್ಲಿ ಇದ್ದ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ. ಎಲ್ಲರೂ ಕ್ಷೇಮವಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇರಾನ್ನ ಮೀನುಗಾರಿಕಾ ಬೋಟ್ ಗೆ ಡಿಕ್ಕಿ ಹೊಡೆದ ಕಾರಣದಿಂದಾಗಿ ಈ ಟ್ಯಾಂಕರ್ನ್ನು ವಶಪಡಿಸಿಕೊಳ್ಳಬೇಕಾಯಿತು ಎಂದು ಇರಾನ್ನ ಅಧಿಕೃತ ಸುದ್ದಿ ಸಂಸ್ಥೆ ಐಆರ್ಎನ್ಎ ಅಧಿಕಾರಿಗಳು ತಿಳಿಸಿದ್ದಾರೆ. ‘ಸ್ಟೆನಾ ಇಂಪೆರೊ’ ಟ್ಯಾಂಕರ್ನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಟ್ಯಾಂಕರ್ನ ಮಾಲೀಕತ್ವ ಹೊಂದಿರುವ ಸ್ವೀಡನ್ ಕಂಪೆನಿ ’ಸ್ಟೆನಾ ಬಲ್ಕ್’ ಹೇಳಿದೆ.
ಇದರಲ್ಲಿ 18 ಭಾರತೀಯರು ಮತ್ತು ರಷ್ಯ, ಫಿಲಿಪ್ಪೀನ್ಸ್, ಲಾಟ್ವಿಯಾ ದೇಶಗಳಸಿಬ್ಬಂದಿ ಇದ್ದರು. ನೌಕೆಯ ಕ್ಯಾಪ್ಟನ್ ಭಾರತೀಯ ವ್ಯಕ್ತಿಯಾಗಿದ್ದಾರೆ ಎಂದು ಹಾರ್ಮುಜ್ ಪ್ರಾಂತ್ಯದ ಬಂದರು ಮತ್ತು ಸಾಗರ ವ್ಯವಹಾರಗಳ ಪ್ರಧಾನ ನಿರ್ದೇಶಕ ಅಲ್ಲಾಹ್ಮೊರದ್ ಅಫಿಫಿಪಾರ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ವಶಪಡಿಸಿಕೊಂಡ ಟ್ಯಾಂಕರ್ನ್ನು ಅಬ್ಬಾಸ್ ಬಂದರ್ನಲ್ಲಿ ಲಂಗರು ಹಾಕಲಾಗಿದೆ. ಇರಾನ್ನ ನಡೆಯನ್ನು ಖಂಡಿಸಿ ರುವ ಫ್ರಾನ್ಸ್ ಮತ್ತು ಜರ್ಮನಿ, ವಶ ಪಡಿಸಿಕೊಂಡ ಸ್ಟೆನಾ ಇಂಪೆರೊ ಹಡಗನ್ನು ಬಿಡುಗಡೆ ಮಾಡಬೇಕು ಎಂದು ಹೇಳಿವೆ.
ಭಾರತೀಯರ ಬಿಡುಗಡೆಗೆ ಆಗ್ರಹ:
ಇರಾನ್ ವಶಪಡಿಸಿಕೊಂಡಿರುವ ಟ್ಯಾಂಕರ್ ನಲ್ಲಿರುವ ಭಾರತೀಯರನ್ನು ಸುರಕ್ಷಿತ ವಾಗಿ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಭಾರತವು ಇರಾನ್ ಜೊತೆ ಸಂಪರ್ಕದಲ್ಲಿದೆ ಎಂದು ಶನಿವಾರ ಭಾರತ ತಿಳಿಸಿದೆ. ‘ಶೀಘ್ರ ಭಾರತೀ ಯರನ್ನು ಬಿಡುಗಡೆ ಮಾಡುವಂತೆ ಇರಾನ್ ಸರ್ಕಾರವನ್ನು ಆಗ್ರಹಿಸಿದ್ದೇವೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
ಇರಾನ್ ಅಪಾಯಕಾರಿ ದಾರಿಯನ್ನು ಆಯ್ಕೆ ಮಾಡಿಕೊಂಡಿದೆ. ಅಸ್ಥಿರವಾದ ವರ್ತನೆಯನ್ನು ತೋರುತ್ತಿದೆ ಎಂದು ಬ್ರಿಟನ್ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.