ನವದೆಹಲಿ: ಆಪರೇಷನ್ ಗಂಗಾ ಮೂಲಕ ಯುದ್ಧಪೀಡಿತ ಉಕ್ರೇನ್ನ ಹಲವು ನಗರಗಳಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ನೆರವಾದ ಉಕ್ರೇನ್, ರಷ್ಯಾ ಮತ್ತು ಇತರ ಹಲವು ದೇಶಗಳಿಗೆ ಕೇಂದ್ರ ಸರ್ಕಾರ ಕೃತಜ್ಞತೆ ಸಲ್ಲಿಸಿದೆ.
ಈ ಸಂಬಂಧ ಶುಕ್ರವಾರ ಟ್ವೀಟ್ ಮಾಡಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು, 'ಈಶಾನ್ಯ ಭಾಗದ ಸುಮಿ ನಗರದಲ್ಲಿದ್ದ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸುವುದು ಸವಾಲಿನ ಕೆಲಸವೇ ಆಗಿತ್ತು. ಆದರೆ ಉಕ್ರೇನ್, ಉಕ್ರೇನ್ನ ಸುತ್ತಮುತ್ತಲ ದೇಶಗಳಾದ ರೊಮಾನಿಯಾ, ಹಂಗೆರಿ, ಪೋಲೆಂಡ್, ಸ್ಲೊವೇಕಿಯಾ ಹಾಗೂ ಮೊಲ್ಡೊವಾ ದೇಶಗಳು ನೀಡಿದ ಸಹಕಾರದಿಂದಾಗಿ ಅಪರೇಷನ್ ಗಂಗಾ ಕಾರ್ಯಾಚರಣೆ ಮೂಲಕ ಭಾರತೀಯರನ್ನು ಸ್ವದೇಶಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದೇವೆ. ಇದಕ್ಕಾಗಿ ಈ ಎಲ್ಲಾ ದೇಶಗಳಿಗೂ ಕೃತಜ್ಞತೆಗಳು' ಎಂದು ಹೇಳಿದ್ದಾರೆ.
ಫೆ.26ರಂದು ಆರಂಭಿಸಲಾಗಿದ್ದ ಆಪರೇಷನ್ ಗಂಗಾ ಕಾರ್ಯಾಚರಣೆ ಮೂಲಕ ಒಟ್ಟಾರೆ 18 ಸಾವಿರ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ. ಈ ಮಹತ್ವದ ಕಾರ್ಯಕ್ಕೆ ಹಗಲಿರುಳು ದಣಿವರಿಯದೆ ಶ್ರಮಿಸಿದ ಸರ್ಕಾರೇತರ ಸಂಸ್ಥೆಗಳು, ಸ್ವಯಂಸೇವಕರು, ಕಾರ್ಪೊರೇಟ್ ಸಂಸ್ಥೆಗಳು, ನಮ್ಮ ವಿಮಾನಯಾನ ಸಂಸ್ಥೆಗಳು ಹಾಗೂ ಭಾರತದ ವಾಯುಸೇನೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.