ADVERTISEMENT

‘ಸಿಖ್‌ ಯಾತ್ರಿಕರಿಗೆ ವೀಸಾ ಸೌಲಭ್ಯ’

ಪಿಟಿಐ
Published 3 ಸೆಪ್ಟೆಂಬರ್ 2019, 20:00 IST
Last Updated 3 ಸೆಪ್ಟೆಂಬರ್ 2019, 20:00 IST
ಇಮ್ರಾನ್‌ ಖಾನ್‌
ಇಮ್ರಾನ್‌ ಖಾನ್‌   

ಲಾಹೋರ್‌ (ಪಿಟಿಐ): ಭಾರತ ಮತ್ತು ಇತರೆ ರಾಷ್ಟ್ರಗಳಿಂದ ಪಾಕಿಸ್ತಾನಕ್ಕೆ ಬಂದಿಳಿಯುವ ಸಿಖ್‌ ಯಾತ್ರಿಕರಿಗೆ ವಿಮಾನ ನಿಲ್ದಾಣದಲ್ಲಿಯೇ ವೀಸಾ ಸೌಲಭ್ಯ ಒದಗಿಸಲಾಗುವುದು ಎಂದು ಪ್ರಧಾನಿ ಇಮ್ರಾನ್‌ ಖಾನ್‌ ಭರವಸೆ ನೀಡಿದ್ದಾರೆ ಎಂದು ಮಾಧ್ಯಮದ ವರದಿ ಹೇಳಿದೆ.

ಸಿಖ್‌ ಯಾತ್ರಿಕರಿಗೆ ಪಾಕಿಸ್ತಾನದ ಕರ್ತಾರಪುರವು ಮದೀನಾ ಮತ್ತು ನನ್‌ಕಾನಾ ಸಾಹೀಬ್‌, ಮೆಕ್ಕಾ ಇದ್ದಂತೆ. ಮಕ್ಕಾ ಮತ್ತು ಮದೀನಾಕ್ಕೆ ತೆರಳಲು ಮುಸ್ಲಿಮರಿಗೆ ಹೇಗೆ ಅವಕಾಶವಿದೆಯೋ ಅದೇ ರೀತಿ ಸಿಖ್‌ ಸಮುದಾಯಕ್ಕೆ ಕರ್ತಾರಪುರ ಮತ್ತು ನನ್‌ಕಾನಾ ಸಾಹಿಬ್‌ ಭೇಟಿಗೆ ಅವಕಾಶ ನೀಡ ಲಾಗುವುದು. ಸಿಖ್‌ ಯಾತ್ರಿಕರಿಗೆ ಸಕಲಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಖಾನ್‌ ಭರವಸೆ ನೀಡಿದ್ದಾರೆ ಎಂದು ನ್ಯೂಸ್‌ ಇಂಟರ್‌ ನ್ಯಾಷನಲ್‌ ವರದಿ ಮಾಡಿದೆ.

ಇಲ್ಲಿನ ರಾಜಭವನದಲ್ಲಿ ಸೋಮ ವಾರ ನಡೆದ ಅಂತರರಾಷ್ಟ್ರೀಯ ಸಿಖ್‌ ಸಮಾವೇಶದಲ್ಲಿ ಮಾತನಾಡಿದ ಅವರು, ‘ನಿಗದಿತ ಅವಧಿಯಲ್ಲಿ ಅನೇಕ ಬಾರಿ ಹೋಗಿ ಬರುವ ವೀಸಾ ಸೌಕರ್ಯ ಒದಗಿಸಲಾಗುವುದು. ಇದು ನಮ್ಮ ಜವಾಬ್ದಾರಿಯಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

ನಾನ್‌ಕಾನಾ ಸಾಹಿಬ್‌ನಲ್ಲಿ ನವೆಂಬರ್‌ 12 ರಂದು ನಡೆಯುವ ಗುರು ನಾನಕ್‌ ದೇವ್‌ ಅವರ 550 ಜನ್ಮ ವರ್ಷಾಚರಣೆಯಲ್ಲಿ ಭಾಗವಹಿಸಲು ಬರುವ ಸಿಖ್‌ ಯಾತ್ರಿಕರಿಗೆ ವೀಸಾ ನೀಡುವ ಪ್ರಕ್ರಿಯೆಯನ್ನು ಸೆಪ್ಟೆಂಬರ್‌ 30 ರೊಳಗೆ ಪೂರ್ಣಗೊಳಿಸಲು ಪಾಕಿಸ್ತಾನ ನಿರ್ಧರಿಸಿದೆ.

ಕರ್ತಾರಪುರದಲ್ಲಿರುವ ಗುರು ದ್ವಾರ್‌ ದರ್ಬಾರ್‌ ಸಾಹಿಬ್‌ಗೆ ವೀಸಾ ಇಲ್ಲದೆ ಪ್ರಯಾಣಿಸಲು ಅನುಕೂಲ ಕಲ್ಪಿಸುವ ಕರ್ತಾರಪುರ ಕಾರಿಡಾರ್ ಯೋಜನೆಗೆ ಭಾರತ ಮತ್ತು ಪಾಕಿಸ್ತಾನ ಒಪ್ಪಿಗೆ ನೀಡಿವೆ. ಪ್ರತಿದಿನ 5,000 ಸಿಖ್‌ ಯಾತ್ರಿಕರಿಗೆ ಈ ಕಾರಿಡಾರ್‌ ಮೂಲಕ ಹೋಗಿಬರಲು ಅವಕಾಶ ಒದಗಿಸಲು ಉಭಯ ರಾಷ್ಟ್ರಗಳು ಒಪ್ಪಿಗೆ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.