ಪೆಶಾವರ: ರಾಷ್ಟ್ರೀಯ ಅಸೆಂಬ್ಲಿ ವಿಸರ್ಜನೆ ಮತ್ತು ದೇಶದಲ್ಲಿ ಹೊಸ ಚುನಾವಣೆಗೆ ಒತ್ತಾಯಿಸಲು ಮೇ 25ರಂದು ಇಸ್ಲಾಮಾಬಾದ್ಗೆ ಶಾಂತಿಯುತವಾಗಿ ಮೆರವಣಿಗೆ ನಡೆಸುವಂತೆ ಪಾಕಿಸ್ತಾನದ ಉಚ್ಚಾಟಿತ ಪ್ರಧಾನಿ ಇಮ್ರಾನ್ ಖಾನ್ ಅವರು ಭಾನುವಾರ ತಮ್ಮ ಬೆಂಬಲಿಗರನ್ನು ಕೇಳಿಕೊಂಡಿದ್ದಾರೆ.
ಪೆಶಾವರದಲ್ಲಿ ನಡೆದ ತಮ್ಮ ಪಕ್ಷದ ಕೋರ್ ಕಮಿಟಿ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಖಾನ್, ‘ಮೆರವಣಿಗೆಯನ್ನು ಧರಣಿಯಾಗಿ ಪರಿವರ್ತಿಸಲಾಗುವುದು ಮತ್ತು ತಮ್ಮ ಬೇಡಿಕೆಗಳನ್ನು ಅಂಗೀಕರಿಸುವವರೆಗೆ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ’ ಎಂದು ‘ಡಾನ್’ ಪತ್ರಿಕೆಯು ವರದಿ ಮಾಡಿದೆ.
‘ಮೇ 25ರಂದು ನಾನು ನಿಮ್ಮನ್ನು (ಬೆಂಬಲಿಗರನ್ನು) ಇಸ್ಲಾಮಾಬಾದ್ನಲ್ಲಿರುವ ಶ್ರೀನಗರ ಹೆದ್ದಾರಿಯಲ್ಲಿ ಭೇಟಿ ಮಾಡುವೆ. ಎಲ್ಲ ಜನರು ಬರಬೇಕೆಂದು ನಾನು ಬಯಸುತ್ತೇನೆ. ಏಕೆಂದರೆ ಇದು ಜಿಹಾದ್, ರಾಜಕೀಯವಲ್ಲ. ನಾನು ನಿರ್ಧರಿಸಿದ್ದೇನೆ ಮತ್ತು ನನ್ನ ತಂಡಕ್ಕೆ ಹೇಳಿದ್ದೇನೆ ನಾವು ನಮ್ಮ ಪ್ರಾಣವನ್ನು ತ್ಯಾಗ ಮಾಡಲೂ ಸಿದ್ಧರಾಗಿರಬೇಕು’ ಎಂದೂ ಖಾನ್ ತಮ್ಮ ಬೆಂಬಲಿಗರಿಗೆ ತಿಳಿಸಿದ್ದಾರೆ.
ಭಾರತ ಕುರಿತು ಶ್ಲಾಘನೆ: ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಕುರಿತ ವರದಿಯೊಂದನ್ನು ಉಲ್ಲೇಖಿಸಿ ಟ್ವೀಟ್ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿರುವ ಇಮ್ರಾನ್ ಖಾನ್, ಪಾಕಿಸ್ತಾನ ಸರ್ಕಾರವನ್ನು ಟೀಕಿಸಿದ್ದಾರೆ.
‘ಅಮೆರಿಕದ ಒತ್ತಡಕ್ಕೆ ಮಣಿಯದೇ ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸುವ ಮೂಲಕ ತನ್ನ ದೇಶದ ಜನರಿಗೆ ನೆರವಾಗಿದೆ. ಸ್ವತಂತ್ರ ವಿದೇಶಾಂಗ ನೀತಿಯ ಮೂಲಕ ಇಂಥದ್ದೇ ಸಾಧನೆ ಮಾಡಬೇಕೆಂದು ನಮ್ಮ ಸರ್ಕಾರವು ಉದ್ದೇಶಿಸಿತ್ತು’ ಎಂದೂ ಅವರು ಟ್ವೀಟ್ನಲ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.