ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಹಲವು ಬೆಂಬಲಿಗರನ್ನು ಬಂಧಿಸಿರುವ ಪಾಕಿಸ್ತಾನ ಸರ್ಕಾರ, ರಸ್ತೆಗಳನ್ನು ಸಹ ಬಂದ್ ಮಾಡಿದೆ. ಈ ಮೂಲಕ ಸರ್ಕಾರವುತೆಹ್ರೀಕ್-ಇ-ಇನ್ಸಾಫ್(ಪಿಟಿಐ) ಪಕ್ಷದ ಪ್ರತಿಭಟನೆಗಳಿಗೆ ತಡೆ ಒಡ್ಡಲು ಪ್ರಯತ್ನಿಸಿದೆ.
ಮಂಗಳವಾರ ಪಿಟಿಐ ಪಕ್ಷದ ಪ್ರತಿಭಟನೆಗಳು ಮತ್ತು ಮೆರವಣಿಗೆಗಳ ಮೇಲೆ ಪಾಕಿಸ್ತಾನ ಸರ್ಕಾರ ನಿರ್ಬಂಧ ಹೇರಿತ್ತು. ಬುಧವಾರ ರಸ್ತೆಗಳನ್ನು ಬಂದ್ ಮಾಡಿದ ಸರ್ಕಾರ, ಹಲವು ನಗರಗಳಲ್ಲಿ ಇಮ್ರಾನ್ ಖಾನ್ ಅವರ ನೂರಾರು ಬೆಂಬಲಿಗರನ್ನು ಬಂಧಿಸುತ್ತಿದೆ. ಈ ಮೂಲಕ ಖಾನ್ ಕರೆಕೊಟ್ಟಿರುವ ‘ಆಜಾದಿ ಮೆರವಣಿಗೆ’ಯಲ್ಲಿ ಪಾಲ್ಗೊಳ್ಳದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.
ಪ್ರಧಾನಿಶಾಹಬಾಝ್ ಷರೀಫ್ ನೇತೃತ್ವದ ಸರ್ಕಾರ ಮೊದಲಿಗೆ ಈ ಪ್ರತಿಭಟನೆಗೆ ಅವಕಾಶ ನೀಡಿತ್ತು. ಆದರೆ, ಮೆರವಣಿಗೆಯಿಂದ ಕಾನೂನು ಸುವ್ಯವಸ್ಥೆ ಹಾಳಾಗಿ, ಹಿಂಸಾಚಾರ ತಲೆದೋರಬಹುದು ಎಂಬ ಭೀತಿಯಿಂದಾಗಿ, ಪ್ರತಿಭಟನೆಗೆ ನೀಡಲಾಗಿದ್ದ ಅವಕಾಶವನ್ನು ಮಂಗಳವಾರ ಹಿಂಪಡೆಯಲಾಗಿತ್ತು. ಜೊತೆಗೆ ಲಾಹೋರ್, ಇಸ್ಲಾಮಾಬಾದ್, ಕರಾಚಿ ಹಾಗೂ ರಾವಲ್ಪಿಂಡಿ ಸೇರಿದಂತೆ ಇನ್ನಿತರ ಪ್ರಮುಖ ನಗರಗಳಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ.
ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸಿ, ದೇಶದಲ್ಲಿ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿ ಬುಧವಾರ ರಾಜಧಾನಿ ಇಸ್ಲಾಮಾಬಾದ್ಗೆ ಶಾಂತಿಯುತ ಮೆರವಣಿಗೆ ನಡೆಸುವಂತೆ ತಮ್ಮ ಬೆಂಬಲಿಗರಿಗೆ ಇಮ್ರಾನ್ ಖಾನ್ ಕರೆ ನೀಡಿದ್ದರು.
ಆದರೆ, ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸಿ ಚುನಾವಣೆ ಎದುರಿಸುವ ವಿರೋಧ ಪಕ್ಷದ ಕೋರಿಕೆಯನ್ನು ಪಾಕಿಸ್ತಾನ ಸರ್ಕಾರ ನಿರಾಕರಿಸಿತ್ತು. ಅಲ್ಲದೆ, ನಿಗದಿಯಂತೆ ಮುಂದಿನ ವರ್ಷವೇ ಚುನಾವಣೆ ನಡೆಯಲಿದೆ ಎಂದು ಹೇಳಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.