ನವದೆಹಲಿ:ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂ, ಕ್ರೈಸ್ತರು ಹಾಗೂ ಸಿಖ್ಖರಿಗೆ ಕಿರುಕುಳ ನೀಡುವುದಲ್ಲದೇ, ಕೊಲ್ಲಲಾಗುತ್ತಿದೆ. ಮುಸ್ಲಿಮರ ಹತ್ಯೆಯೂ ನಡೆಯುತ್ತಿದೆ ಎಂದು ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಭಾರತ ಆರೋಪಿಸಿತು.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು, ಇಸ್ಲಾಂ ಕುರಿತಂತೆ ಭಾರತ ಜನರಲ್ಲಿ ಭಯ ಹುಟ್ಟುಹಾಕುತ್ತಿದೆ (ಇಸ್ಲಾಮೋಫೋಬಿಯಾ) ಎಂದು ಆರೋಪಿಸಿದರು. ಇದನ್ನು ಪ್ರತಿಭಟಿಸಿದ ಭಾರತದ ಪ್ರತಿನಿಧಿಗಳು ಸಭೆಯಿಂದ ಹೊರ ನಡೆಸಿದರು.
ನಂತರ, ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿಯ ಪ್ರಥಮ ಕಾರ್ಯದರ್ಶಿ ಮಿಜಿತೊ ವಿನಿಟೊ ಅವರು,ಇಮ್ರಾನ್ಖಾನ್ ಆರೋಪಕ್ಕೆ ತಿರುಗೇಟು ನೀಡಿದರು.
‘ಒತ್ತಾಯದ ಮತಾಂತರ, ಧರ್ಮನಿಂದನೆ ಕಾನೂನು ಬಳಸಿ ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂ,ಕ್ರೈಸ್ತರು ಹಾಗೂ ಸಿಖ್ಖರ ಜನಸಂಖ್ಯೆಯನ್ನು ವ್ಯವಸ್ಥಿತವಾಗಿ ಕಡಿಮೆ ಮಾಡಲಾಗಿದೆ‘ ಎಂದು ಟೀಕಿಸಿದರು.
‘ತನ್ನನ್ನು ಇಸ್ಲಾಂನ ಅನುಯಾಯಿ ಎಂದು ಹೇಳಿಕೊಳ್ಳುತ್ತಿರುವ ರಾಷ್ಟ್ರದಲ್ಲಿರುವ ಇಸ್ಲಾಂನ ಬೇರೆ ಮತಾನುಯಾಯಿಗಳು, ಬೇರೆ ಪ್ರದೇಶಕ್ಕೆ ಸೇರಿದವರನ್ನು ಕೊಲ್ಲಲಾಗುತ್ತಿದೆ. ಅವರ ಮೇಲೆ ಭಯೋತ್ಪಾದಕ ದಾಳಿ ನಡೆಸಲಾಗುತ್ತಿದೆ’ ಎಂದೂ ವಾಗ್ದಾಳಿ ನಡೆಸಿದರು.
‘ಜುಲೈನಲ್ಲಿ ಪಾಕಿಸ್ತಾನದ ಸಂಸತ್ನಲ್ಲಿ ಮಾತನಾಡಿದ ಪ್ರಧಾನಿ ಇಮ್ರಾನ್ ಖಾನ್,ಅಲ್ ಖೈದಾ ಮುಖಂಡ ಒಸಾಮಾ ಬಿನ್ ಲಾಡೆನ್ನನ್ನು ಹುತಾತ್ಮ ಎಂಬುದಾಗಿ ಕರೆದರು. 2019ರಲ್ಲಿ ಅಮೆರಿಕದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿ, ಪಾಕಿಸ್ತಾನದಲ್ಲಿ ಇನ್ನೂ 30,000–40,000 ಉಗ್ರರು ಸಕ್ರಿಯರಾಗಿದ್ದಾರೆ. ಅಫ್ಗಾನಿಸ್ತಾನ, ಜಮ್ಮು–ಕಾಶ್ಮೀರದಲ್ಲಿ ಹೋರಾಡಲು ಇವರಿಗೆ ತರಬೇತಿ ನೀಡಲಾಗಿದೆ ಎಂದಿದ್ದರು’ ಎಂದೂ ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.