
ಇಸ್ಲಾಮಾಬಾದ್: ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯದ ಕುರಿತು ಕಳವಳ ವ್ಯಕ್ತಪಡಿಸಿ ಪಾಕಿಸ್ತಾನದ ವಿಪಕ್ಷಗಳ ಮೈತ್ರಿಕೂಟವು ಹಮ್ಮಿಕೊಂಡಿದ್ದ ಧರಣಿ ಹೋರಾಟವನ್ನು ಬುಧವಾರ ಕೊನೆಗೊಳಿಸಿತು.
ಇಮ್ರಾನ್ ಆರೋಗ್ಯ ಸಮಸ್ಯೆಯನ್ನು ಎತ್ತಿ ಹಿಡಿಯುವ ತಮ್ಮ ಉದ್ದೇಶ ಈಡೇರಿದೆ. ಹೀಗಾಗಿ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಗುತ್ತಿದೆ ಎಂದು ಪಕ್ಷಗಳ ನಾಯಕರು ತಿಳಿಸಿದರು.
ಇಮ್ರಾನ್ ಖಾನ್ ಅವರ ತಹ್ರೀಕ್–ಎ– ಇನ್ಸಾಫ್ (ಪಿಟಿಐ) ಹಾಗೂ ಟಿಟಿಎಪಿ ಮೈತ್ರಿ ಪಕ್ಷಗಳು, ಇಸ್ಲಾಮಾಬಾದ್, ಸಂಸತ್ ಆವರಣ ಹಾಗೂ ಖೈಬರ್ ಪಖ್ತುಂಕ್ವಾದಲ್ಲಿ ಶುಕ್ರವಾರ ಧರಣಿ ಆರಂಭಿಸಿದವು.
ಇಮ್ರಾನ್ ಅವರ ಬಲಗಣ್ಣಿನ ಗೋಚರತೆಯು ಸ್ವಲ್ಪ ಹೆಚ್ಚಾಗಿದೆ ಎಂದು ವಿಪಕ್ಷ ನಾಯಕ ಅಲ್ಲಮಾ ರಾಜಾ ನಾಸಿರ್ ಅಬ್ಬಾಸ್ ಅವರು ಹೇಳಿದರು.
ಇಮ್ರಾನ್ ಅವರು ಬಲಗಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಅವರ ಕುಟುಂಬದವರು ಹಾಗೂ ವಕೀಲರು ಈ ಹಿಂದೆ ತಿಳಿಸಿದ್ದರು.
ಇಮ್ರಾನ್ ಅವರ ವೈದ್ಯರು ಅವರನ್ನು ಭೇಟಿಯಾಗಲು ಅನುಮತಿ ನೀಡಬೇಕು. ಇಸ್ಲಾಮಾಬಾದ್ನಲ್ಲಿರುವ ಖಾಸಗಿ ಶಿಫಾ ಅಂತರರಾಷ್ಟ್ರೀಯ ಆಸ್ಪತ್ರೆಯಲ್ಲಿ ಇಮ್ರಾನ್ ಅವರಿಗೆ ಚಿಕಿತ್ಸೆ ನೀಡಬೇಕು ಎಂದು ಅಬ್ಬಾಸ್ ಆಗ್ರಹಿಸಿದರು.
ಗುರುವಾರ ರಂಜಾನ್ ಆಚರಣೆ ಆರಂಭವಾಗಲಿರುವುದನ್ನು ಗಮನದಲ್ಲಿಟ್ಟುಕೊಂಡು ಧರಣಿಯನ್ನು ನಿಲ್ಲಿಸಲಾಯಿತು ಎಂದೂ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.